ಮೈಸೂರು,ಮಾರ್ಚ್, 21,2026 (www.justkannada.in): ಮೈಸೂರು ತಾಲೂಕಿನ ಮೂಡಲಹುಂಡಿ ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಬೀರೇಶ್ವರ, ಬಸವೇಶ್ವರರ ಉತ್ಸವ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ತಿ.ನರಸೀಪುರದ ತ್ರಿವೆಣಿ ಸಂಗಮ ಕ್ಷೇತ್ರಕ್ಕೆ ಬೀರೇಶ್ವರ, ಬಸವೇಶ್ವರ, ಬನ್ನಿಮಹಾಕಾಳೇಶ್ವರಿ(ಬನ್ನಮ್ಮ) ದೇವರ ಉತ್ಸವ ಮೂರ್ತಿಯನ್ನು ಸಂಪ್ರದಾಯದಂತೆ ಕೊಂಡೊಯ್ದು ಮಜ್ಜನ ಸೇವೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ವರಕೋಡು ಗ್ರಾಮಕ್ಕೆ ತರಲಾಯಿತು. ಗುರುವಾರ ರಾತ್ರಿಯಿಡೀ ವರಕೋಡು ಗ್ರಾಮದಲ್ಲಿ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಮಂಗಳವಾದ್ಯದೊಂದಿಗೆ ನೆರವೇರಿಸಲಾಯಿತು. ಶುಕ್ರವಾರ ಬಡಗಲಹುಂಡಿ, ಕೆಂಪೇಗೌಡನಹುಂಡಿ ಹಾಗೂ ಹೊಸಹುಂಡಿ ಗ್ರಾಮದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು.
ಶುಕ್ರವಾರ ಸಂಜೆ 6.30ರಿಂದ ರಾತ್ರಿ 11.15ರವರೆಗೆ ಮೂಡಲಹುಂಡಿ ಗ್ರಾಮದಲ್ಲಿ ಬೀರೇಶ್ವರ, ಬಸವೇಶ್ವರರ ಉತ್ಸವ ಮೂರ್ತಿ ಹಾಗೂ ಬನ್ನಿಮಹಾಕಾಳೇಶ್ವರಿಯ ಪೂಜಾ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.
ಮೆರವಣಿಗೆಯಲ್ಲಿ ಗ್ರಾಮದ ಕಂಸಾಳೆ ತಂಡ, ವೀರಮಕ್ಕಳ ತಂಡ, ಮಂಗಳವಾದ್ಯ, ತಮಟೆ ಮೇಳ ಜಾತ್ರೆಗೆ ಮೆರಗು ತುಂಬಿದವು. ಈ ವೇಳೆ ಗ್ರಾಮದ ಮಹಿಳೆಯರು ಬೀರೇಶ್ವರ ಹಾಗೂ ಮಲೆ ಮಹದೇಶ್ವರರ ಆರಾಧಿಸುವ ಜಾನಪದ ಗೀತೆ, ಸೋಬಾನೆ ಪದ ಹಾಡುತ್ತಾ ಯುಗಾದಿ ಪೂಜಾ ಮಹೋತ್ಸವಕ್ಕೆ ಕಳೆ ಕಟ್ಟಿದರು. ಬಳಿಕ ದೇವರ ಉತ್ಸವ ಮೂರ್ತಿಯನ್ನು ವರಕೋಡು ಗ್ರಾಮದ ಬೀರೇಶ್ವರ ದೇವಾಲಯಕ್ಕೆ ಕೊಂಡೊಯ್ದು ಇಡುವ ಮೂಲಕ ಯುಗಾದಿ ಜಾತ್ರಾ ಸಂಭ್ರಮಕ್ಕೆ ತೆರೆ ಎಳೆಯಲಾಯಿತು.
Key words: Mysore, Beereshwara Basaveshwara, utsava
The post ವಿಜೃಂಭಣೆಯಿಂದ ನೆರವೇರಿದ ಬೀರೇಶ್ವರ, ಬಸವೇಶ್ವರರ ಉತ್ಸವ ಮೂರ್ತಿ ಮೆರವಣಿಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




