ಮೈಸೂರು,ಜುಲೈ,14,2025 (www.justkannada.in): ಅಂಧ ಪ್ರಯಾಣಿಕರ ಸರಳ ಪ್ರಯಾಣಕ್ಕಾಗಿ ರಾಜ್ಯ ಸಾರಿಗೆ ಇಲಾಖೆ ವತಿಯಿಂದ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು ಸಾರಿಗೆ ಬಸ್ ಗಳಿಗೆ ಧ್ವನಿ ಸ್ಪಂದನ ಡಿವೈಸ್ ಅಳವಡಿಕೆ ಯೋಜನೆಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಚಾಲನೆ ನೀಡಿದರು.
ಮೈಸೂರಿನ ಸಿಟಿ ಬಸ್ ನಿಲ್ದಾಣದಲ್ಲಿ ನೂತನ ಯೋಜನೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಚಾಲನೆ ಕೊಟ್ಟರು. ಅಂಧ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಾರಿಗೆ ಬಸ್ ಗಳಿಗೆ ಧ್ವನಿ ಸ್ಪಂದನ ಡಿವೈಸ್ ಅಳವಡಿಕೆ ಮಾಡಲಾಗಿದ್ದು,ಈ ಡಿವೈಸ್ ಧ್ವನಿ ವರ್ಧಕ ಸಾಧನದ ಮೂಲಕ ಹೋಗುವ ರೂಟ್ ಬಗ್ಗೆ ಮಾಹಿತಿ ನೀಡಲಿದೆ. ಬಸ್ ನಿಂತ ಸ್ಥಳಕ್ಕೆ ಅಂಧರ ಕರೆದೋಯ್ಯುವ ಸಾಧನ ಇದಾಗಿದೆ. ಬಸ್ ನಿಲ್ದಾಣದ 30 ಮೀಟರ್ ಒಳಗೆ ಬಸ್ ಗಳ ಮಾಹಿತಿ ನೀಡಲಿದೆ.
ಮೈಸೂರು ನಗರದ 77 ಮಾರ್ಗಗಳ ಸುಮಾರು 200 ಕ್ಕೂ ಹೆಚ್ಚು ಬಸ್ ಗಳಿಗೆ ಈ ಡಿವೈಸ್ ಅಳವಡಿಕೆ ಮಾಡಲಾಗಿದೆ. ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ರೇಡಿಯೋ ಫ್ರೀಕ್ವೆನ್ಸಿಯ ಧ್ವನಿ ವರ್ಧಕದ ಮೂಲಕ ಬಸ್ ಇರುವ ಜಾಗಕ್ಕೆ ಕಂಡುಕೊಳ್ಳುವ ಸಾಧನ. ಅಂಧರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ಗಳಲ್ಲಿ ಹೊಸ ತಂತ್ರಜ್ಞಾನ ತಂದಿದ್ದೇವೆ. ಬಟನ್ ಒತ್ತಿದರೆ ಆ ಬಸ್ ಎಲ್ಲಿ ಹೋಗುತ್ತೆ ಅಂತ ಮಾಹಿತಿ ಸಿಗುತ್ತೆ . ದೆಹಲಿ ಮತ್ತು ಮುಂಬೈ ನಗರದಲ್ಲಿ ಈ ವ್ಯವಸ್ಥೆಯಿದೆ . ಈಗ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಈ ವ್ಯವಸ್ಥೆಯನ್ನು ಮೈಸೂರಿನಲ್ಲಿ ಮಾಡಿದ್ದೇವೆ. 200 ಬಸ್ ಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಯಾವ ಕ್ರಾಂತಿಯೂ ಇಲ್ಲ..
ರಾಜ್ಯದಲ್ಲಿ ಸಿಎಂ ಬದಲಾವಣೆ , ಸೆಪ್ಟೆಂಬರ್ ಬಳಿಕ ಕ್ರಾಂತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗರೆಡ್ಡಿ, ಯಾವ ಕ್ರಾಂತಿಯೂ ಇಲ್ಲ ಎಲ್ಲದಕ್ಕೂ ಸಿಎಂ ಸಿದ್ದರಾಮಯ್ಯನವರೇ ಫುಲ್ ಸ್ಟಾಪ್ ಹಾಕಿದ್ದಾರೆ. ನಾನೇ ಐದು ವರ್ಷ ಮುಖ್ಯಮಂತ್ರಿ ಅಂತ ಘೋಷಣೆ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಕೂಡ ಪಕ್ಷ ಏನು ಹೇಳುತ್ತೆ ಅದನ್ನ ಪಾಲಿಸುತ್ತೇನೆ ಎಂದಿದ್ದಾರೆ. ಇದರ ಬಗ್ಗೆ ನಮ್ಮ ಶಾಸಕರು, ಸಚಿವರು ಪದೆ ಪದೆ ಮಾತನಾಡದಿದ್ದರೆ ಪಕ್ಷಕ್ಕೆ ಒಳ್ಳೆಯದು ಎಂದರು.
ಸುರ್ಜೇವಾಲ ಶಾಸಕರ ಅಹವಾಲು ಕೇಳಿದ್ದಾರೆ. ಯಾವ ಮಂತ್ರಿ ಬಗ್ಗೆ ನೀವು ದೂರು ಬಂದಿದೆ ಗೊತ್ತಿಲ್ಲ. ಎಲ್ಲವನ್ನೂ ಪಕ್ಷದ ಹೈಕಮಾಂಡ್ ಸರಿ ಮಾಡುತ್ತದೆ ಎಂದು ರಾಮಲಿಂಗರೆಡ್ಡಿ ತಿಳಿಸಿದರು.
ಹೊರಗಿನಿಂದ ಬಂದು ಸಿದ್ದರಾಮಯ್ಯ 2 ಬಾರಿ ಸಿಎಂ ಆದರು ಎಂಬ ಕಾಂಗ್ರೆಸ್ ಕೆಲ ನಾಯಕರ ವಿಚಾರ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗರೆಡ್ಡಿ, ಎಲ್ಲಿಂದ ಬಂದಿದ್ದರೂ ಅವರು ಈಗ ಕಾಂಗ್ರೆಸ್ ನಾಯಕರು. ಅವರು ಜನಪ್ರಿಯ ನಾಯಕರಾಗಿದ್ದರು, ಮಾಸ್ ಲೀಡರ್, ಹಾಗಾಗಿ ಸಿಎಂ ಆದರು. ಸಿಎಂ ಆಗಿ ಜನರಿಗೆ ಒಳ್ಳೆಯ ಕೆಲಸ ಮಾಡಿಲ್ವಾ ಎಂದು ಪ್ರಶ್ನಿಸಿದರು.
ಅವರು ಸಿಎಂ ಆಗ್ತಾರೆ, ಯಾವಾಗ ಏನು ಗೊತ್ತಿಲ್ಲ
ಡಿಕೆ ಶಿವಕುಮಾರ್ ಸಿಎಂ ಆಗುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗರೆಡ್ಡಿ, ಡಿಕೆಶಿ ಹುಟ್ಟು ಕಾಂಗ್ರೆಸಿಗರು, ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಸಿಎಂ ಆಗ್ತಾರೆ, ಯಾವಾಗ ಏನು ಗೊತ್ತಿಲ್ಲ. ಅದಕ್ಕೂ ಕಾಲ ಬರುತ್ತೆ ಎಂದರು.
Key words: Minister, Ramalingareddy, mysore, device, bus, blind passengers
The post ಅಂಧ ಪ್ರಯಾಣಿಕರಿಗಾಗಿ ಬಸ್ ಗಳಿಗೆ ಧ್ವನಿ ಸ್ಪಂದನ ಡಿವೈಸ್: ನೂತನ ಯೋಜನೆಗೆ ಚಾಲನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.