ಮೈಸೂರು,ಆಗಸ್ಟ್,14,2025 (www.justkannada.in): ದೇಶವೇ ಸಂಭ್ರಮಿಸುವ ಸ್ವಾತಂತ್ರ್ಯ ಮಹೋತ್ಸವಕ್ಕೆ ನಾನಾ ರೀತಿಯ ತಯಾರಿಗಳು ನಡೆದಿರುವಂತೆ ಸ್ವಾತಂತ್ರ್ಯೋತ್ಸವದ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯ 85 ಅಮೃತ ಸರೋವರ ಕೆರೆಗಳಲ್ಲಿ ಧ್ವಜಾರೋಹಣಕ್ಕೆ ಜಿಲ್ಲಾ ಪಂಚಾಯಿತಿ ಸಿದ್ದತೆ ನಡೆಸಿದೆ.
ಆ.15ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿರುವ 85 ಅಮೃತ ಸರೋವರ ಸ್ಥಳಗಳಲ್ಲಿ ಧ್ವಜಾರೋಹಣ ಮಾಡುವ ಮೂಲಕ ಜಲಸಂರಕ್ಷಣೆಗಾಗಿ “ಒಂದು ಸರೋವರ, ಒಂದು ಸಂಕಲ್ಪʼ ಎಂಬ ಸಂದೇಶ ಸಾರಲು ಹೊರಟಿದೆ.
ಆ.15 ರಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಂತರ್ಜಲ ಉಳಿಸುವ ಅಭಿಯಾನದಡಿಯಲ್ಲಿ 85 ಅಮೃತ ಸರೋವರ ಕೆರೆಗಳಲ್ಲಿ ತ್ರಿವರ್ಣ ದ್ವಜ ಹಾರಲಿದೆ. ಅಮೃತ ಸರೋವರದ ಅಂಗಳದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಅಥವಾ ಕುಟುಂಬ ಸದಸ್ಯರು, ಸ್ವಾತಂತ್ರ್ಯೋತ್ತರ ಹುತಾತ್ಮರ ಕುಟುಂಬ ಸದಸ್ಯರು ಅಥವಾ ಸ್ಥಳೀಯ ಪದ್ಮ ಪ್ರಶಸ್ತಿ ಪುರಸ್ಕೃತರು ಅಥವಾ ಸ್ಥಳೀಯ ಹಿರಿಯ ನಾಗರೀಕರಿಂದ ತಿರಂಗ ಧ್ವಜಾರೋಹಣ ನೆರವೇರಿಸಲಾಗುತ್ತದೆ.
ವಿವಿಧ ಕಾರ್ಯಕ್ರಮಗಳು:
ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಜಲಸಂರಕ್ಷಣೆ, ಹವಾಮಾನ ಬದಲಾವಣೆಯ ಕುರಿತು ಪ್ರಬಂಧ ಬರವಣಿಗೆ, ಕವನ ಸ್ಪರ್ಧೆ, ಪರಿಸರ ಸಂರಕ್ಷಣೆಯ ಕುರಿತ ನಾಟಕಗಳು ಮತ್ತು ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನಗಳು, ಸಸಿ ನೆಡುವುದು, ಚಿತ್ರಕಲೆ ಸ್ಪರ್ಧೆಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರು, ಪದ್ಮ ಪ್ರಶಸ್ತಿ ಪುರಸ್ಕೃತರೊಂದಿಗೆ ಕಥೆ ಹೇಳುವ ಚಟುವಟಿಕೆಗಳನ್ನು ಆಯೋಜಿಸುವುದು ಈ ಬಾರಿಯ ಸ್ವಾತಂತ್ರ್ಯ ಮಹೋತ್ಸವದ ವಿಶೇಷ.
ಹೆಚ್.ಡಿ.ಕೋಟೆಯಲ್ಲಿ 16, ಹುಣಸೂರು 16, ಮೈಸೂರು 15, ನಂಜನಗೂಡು 5, ಪಿರಿಯಾಪಟ್ಟಣ 4, ಸಾಲಿಗ್ರಾಮ 6, ಸರಗೂರು 8 ಮತ್ತು ತಿ.ನರಸೀಪುರ 15 ಸೇರಿ ಒಟ್ಟು 85 ಅಮೃತ ಸರೋವರ ಕೆರೆಗಳ ದಂಡೆಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಲಿದೆ.
ಈ ಕುರಿತು ಮಾತನಾಡಿರುವ ಮೈಸೂರು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್, ಸರ್ಕಾರದ ನಿರ್ದೇಶನದ ಮೇರೆಗೆ ಮೈಸೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮ-ನರೇಗಾದಡಿ ಅಭಿವೃದ್ಧಿಗೊಂಡಿರುವ ಕೆರೆಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಬಾರಿ ಸ್ವಾತಂತ್ರ್ಯೋತ್ಸವವನ್ನು ಜಿಲ್ಲೆಯ 85 ಕೆರೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಸಿದ್ಧತೆ ನಡೆಸಲಾಗಿದೆ. ಈ ಕಾರ್ಯಕ್ರಮದ ಮೂಲಕ ಜಲಸಂರಕ್ಷಣೆಯ ಮಹತ್ವ ಸಾರಲಿದೆ ಎಂದಿದ್ದಾರೆ.
ಮೈಸೂರು ಜಿ.ಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಭೀಮಪ್ಪ ಕ ಲಾಳಿ ಮಾತನಾಡಿ, ಜಲಮೂಲಗಳ ರಕ್ಷಣೆಗೆ ನಾವು ಪಣ ತೊಡುವ ನಿಟ್ಟಿನಲ್ಲಿ ಮ-ನರೇಗಾ ಯೋಜನೆಯಡಿ ಜಿಲ್ಲೆಯ 85 ಕೆರೆಗಳಲ್ಲೂ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸೇವಕರು ಹಾಗೂ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
Key words: 79th Independence Day, Indian flag, Amrita Lake , Mysore
The post ನಾಳೆ 79ನೇ ಸ್ವಾತಂತ್ರ್ಯೋತ್ಸವ: ಅಮೃತ ಸರೋವರ ಕೆರೆಯಲ್ಲಿ ಮತ್ತೆ ಹಾರಲಿದೆ ತ್ರಿವರ್ಣ ಧ್ವಜ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




