ಮೈಸೂರು,ಸೆಪ್ಟಂಬರ್,19,2026 (www.justkannada.in): ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘವು 2025-26 ಸಾಲಿನಲ್ಲಿ ಲಾಭವನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ಆರ್ಥಿಕ ಬಲವರ್ಧನೆಗೆ ವ್ಯಾಪಾರ ವಹಿವಾಟುಗಳನ್ನು ಆರಂಭಿಸಲು ಅನುಮೋದನೆ ಪಡೆಯಲಾಗಿದೆ.
ನಗರದ ಪತ್ರಕರ್ತರ ಭವನದಲ್ಲಿ ಇಂದು ನಡೆದ 10ನೇ ಸರ್ವ ಸದಸ್ಯರ ಸಭೆ, ಅಭ್ಯುದಯ ಸಹಕಾರಿ ರತ್ನ ಪ್ರಶಸ್ತಿ ಪ್ರದಾನ ಹಾಗೂ ವೈದ್ಯಕೀಯ ಉಪಕರಣ ವಿತರಣೆಯ ಸಮಾರಂಭವನ್ನು ಹಿರಿಯ ಸಹಕಾರಿ ಹಾಗೂ ಹುಣಸೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ. ಅಮರನಾಥ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಹಕಾರ ಸಂಘಗಳು ಆರ್ಥಿಕ ಸ್ವಾವಲಂಬನೆಯ ಹೆಬ್ಬಾಗಿಲುಗಳಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿ ಅನೇಕ ಸಂಘಗಳು ಕೋರ್ಟ್ ಕಟ್ಟಲೆ ಮೆಟ್ಟಿಲೇರಿವೆ. ಇದರಿಂದ ಸಹಕಾರಿ ತತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ವಿಷಾಧಿಸಿದರು.
ಸಹಕಾರ ಸಂಘಗಳು ಮುನ್ನಡೆಸುವುದು ಅತ್ಯಂತ ಸವಾಲಿನ ಸಂಗತಿಯಾಗಿದೆ. ಆದರೆ, ಹತ್ತು ವರ್ಷ ಪೂರೈಸುವ ಒಳಗೆ ಪತ್ರಕರ್ತರ ಸಹಕಾರ ಸಂಘ ಲಾಭದ ದಿಕ್ಕಲ್ಲಿ ಸಾಗುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಇದಕ್ಕೆ ಅಧ್ಯಕ್ಷರ ಬದ್ಧತೆ ಮತ್ತು ಸದಸ್ಯರ ಸಹಕಾರವೇ ಮುಖ್ಯ ಕಾರಣ ಎಂದು ಬಣ್ಣಿಸಿದರು.
ಅಭ್ಯುದಯ ಸಹಕಾರಿ ರತ್ನ ಪ್ರಶಸ್ತಿ ಪ್ರದಾನ
ಹಿರಿಯ ಪತ್ರಕರ್ತ, ನೇರಳೆಕುಪ್ಪೆ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಮಹದೇವ ಎನ್.ಕೆ ಅವರಿಗೆ ಈ ಸಾಲಿನ ಅಭ್ಯುದಯ ಸಹಕಾರಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ನ ನಿರ್ದೇಶಕ ಹೆಚ್.ಎಸ್. ಪ್ರಶಾಂತ್ ತಾತಾಚಾರ್, ಹತ್ತು ವರ್ಷದ ಅಂತರದಲ್ಲಿ ಪತ್ರಕರ್ತರ ಸಹಕಾರ ಸಂಘ ಲಾಭ ಮಾಡಿರುವುದು ಹೆಮ್ಮೆಯ ಸಂಗತಿ. ಆರ್ಥಿಕ ಶಿಸ್ತು ಮತ್ತು ಪ್ರಮಾಣಿಕತೆಯಿಂದ ಸಹಕಾರ ಸಂಘವನ್ನು ಮುನ್ನಡೆಸಿರುವುದಕ್ಕೆ ಇದು ಸಾಕ್ಷಿ ಎಂದು ನುಡಿದರು.
ಇದೇ ಸಂದರ್ಭದಲ್ಲಿ ರಾಜ್ಯ ಪತ್ರ ಬರಹಗಾರರ ಸಂಘದ ಉಪಾಧ್ಯಕ್ಷ ಎಂ.ಎಸ್.ಧನಂಜಯ ಅವರು ಆರೋಗ್ಯ ತಪಾಸಣಾ ಉಪಕರಣ ವಿತರಣೆ ಮಾಡಿ ಸಂಘಕ್ಕೆ ಶುಭಕೋರಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಹನಗೋಡು ನಟರಾಜ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ನಿರ್ದೇಶಕ ಧರ್ಮಾಪುರ ನಾರಾಯಣ್, ನಿರ್ದೇಶಕರಾದ ಹೆಚ್.ಎಸ್. ದಿನೇಶ್ ಕುಮಾರ್, ಮುಕುಂದ, ಕೆಂಪೇಗೌಡ, ಪ್ರಗತಿ ಗೋಪಾಲಕೃಷ್ಣ, ಯಶವಂತ ಸಾಲಿಗ್ರಾಮ, ಕಬಿನಿ ಮಂಜು, ನಂಜುಂಡಯ್ಯ, ಜಯಶಂಕರಮೂರ್ತಿ, ಅಫ್ಸರ್ ಪಾಷ, ಜ್ಯೋತಿ ಜಯಸೇನಾ, ಶಿಲ್ಪ, ಕಾರ್ಯದರ್ಶಿ ವನಿತಾಶ್ರೀ ಎನ್.ಕೆ. ಹಾಜರಿದ್ದರು.
ಹೊಸ ವ್ಯಾಪಾರ ಮಹಿವಾಟು ಆರಂಭ :
ಪತ್ರಕರ್ತರ ಸಹಕಾರ ಸಂಘ ಹತ್ತನೇ ವರ್ಷಕ್ಕೆ ಕಾಲಿರಿಸಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಹೊಸ ವ್ಯಾಪಾರ ವಹಿವಾಟು ನಡೆಸಿ ಸಂಘವನ್ನು ಆರ್ಥಿಕವಾಗಿ ಬಲವರ್ಧನೆಗೊಳಿಸಲು ಅನುಮೋದನೆ ಪಡೆಯಲಾಯಿತು. ತನ್ನ ಸದಸ್ಯರಿಗೆ ಜನತಾ ಬಜಾರ್ ಮಾದರಿ ದಿನ ಉಪಯೋಗಿ ವಸ್ತುಗಳ ಮಾರಾಟ, ಖಾಗಿ ಉತ್ಪನ್ನಗಳ ಮಾರಾಟಕ್ಕೆ ಚಿಂತನೆ ನಡೆದಿದೆ ಎಂದು ಅಧ್ಯಕ್ಷ ಕೆ.ದೀಪಕ್ ತಿಳಿಸಿದರು.
ಒಂಬತ್ತು ವರ್ಷಗಳ ಸತತ ಪ್ರಯತ್ನದಿಂದ ಸಂಘವು 2025-26ನೇ ಸಾಲಿನಲ್ಲಿ 65,855 ರೂ.ಗಳ ನಿವ್ವಳ ಲಾಭ ಮಾಡಿದೆ. ಇದುವರೆಗೆ ಸುಮಾರು 150ಕ್ಕೂ ಹೆಚ್ಚು ಸದಸ್ಯರಿಗೆ 40 ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗಿದ್ದು, ಈ ಸಾಲಿನಲ್ಲಿ ಸಾಲ ವಸೂಲಾತಿಯಲ್ಲಿ ಪ್ರಗತಿ ಸಾಧಿಸಿ, ಆರ್ಥಿಕ ಶಿಸ್ತು ಕಾಪಾಡಿ ದ ಪರಿಣಾಮ ಸಂಘ ಲಾಭದ ಧಿಕ್ಕಿಗೆ ಸಾಗಿದೆ ಎಂದರು.
Key words: Mysuru District Journalists’ Welfare Cooperative Society, Profit, K. Deepak




