ಬೆಂಗಳೂರು, ಜುಲೈ,3,2025 (www.justkannada.in): ಮಹಾರಾಷ್ಟ್ರದಲ್ಲಿ ಕೇವಲ 3 ತಿಂಗಳಲ್ಲಿ 767 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಆರ್.ಅಶೋಕ್, ಮಹಾರಾಷ್ಟ್ರದ ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುವುದಕ್ಕಿಂತ ಮೊದಲು, ನಿಮ್ಮದೇ ಕಾಂಗ್ರೆಸ್ ಪಕ್ಷ ಆಡಳಿತವಿರುವ ಕರ್ನಾಟಕದಲ್ಲಿ ಕೇವಲ 15 ತಿಂಗಳಲ್ಲಿ 1,180ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನು ಸರ್ಕಾರವೇ ದೃಢಪಡಿಸಿದೆ. ಆದರೂ ನೀವು ಮೌನವಾಗಿದ್ದೀರಿ’ ಎಂದು ಟಾಂಗ್ ಕೊಟ್ಟಿದ್ದಾರೆ
‘ಒಂದು ಬಾರಿಯೂ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ನೀವು ಭೇಟಿ ನೀಡಿಲ್ಲ. ದುಃಖ ವ್ಯಕ್ತಪಡಿಸಿಲ್ಲ, ಏಕೆ ಈ ಮೌನ ರಾಹುಲ್ ಜಿ? ಸಹಾನುಭೂತಿ ನಿಮ್ಮ ಪಕ್ಷದ ಆಡಳಿತವಿಲ್ಲದ ರಾಜ್ಯಗಳಿಗೆ ಮಾತ್ರ ಮೀಸಲಾಗಿದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.
‘ನಿಮ್ಮ ಸ್ವಂತ ಸರ್ಕಾರದ ನಿರ್ಲಕ್ಷ್ಯವನ್ನು ಪ್ರಶ್ನಿಸುವ ಬದಲು, ಬೇರೆಯವರ ತಪ್ಪನ್ನು ನೋಡುತ್ತಲೇ ಇದ್ದೀರಿ. ನೀವು ನ್ಯಾಯದ ಬಗ್ಗೆ ಮಾತನಾಡುತ್ತೀರಿ, ಆದರೆ ನಿಮ್ಮ ಸ್ವಂತ ಪಕ್ಷದಲ್ಲೇ ನ್ಯಾಯವನ್ನು ನಿರಾಕರಿಸುತ್ತೀರಿ. ಸಿಎಂ ಸಿದ್ದರಾಮಯ್ಯ ನಿಮ್ಮ ಪಕ್ಷಕ್ಕೆ ಸೇರಿದವರು ಎಂಬ ಕಾರಣಕ್ಕೆ ಟೀಕೆಗೆ ಗುರಿಯಾಗುವುದಿಲ್ಲವೇ? ಕರ್ನಾಟಕದ ರೈತರ ನೋವು ನಿಮ್ಮ ಆತ್ಮಸಾಕ್ಷಿಗೆ ಕಾಣಿಸುತ್ತಿಲ್ಲವೇ’ ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.
Key words: thousand, farmers, suicide, Karnataka , R. Ashok, Rahul Gandhi
The post ಕರ್ನಾಟಕದಲ್ಲೂ ಸಾವಿರಕ್ಕೂ ಹೆಚ್ಚು ರೈತರ ಆತ್ಮಹತ್ಯೆ – ಕೇಂದ್ರ ಪ್ರಶ್ನಿಸಿದ ರಾಹುಲ್ ಗಾಂಧಿಗೆ ಆರ್.ಅಶೋಕ್ ಟಾಂಗ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.