ಮೈಸೂರು,ಜೂನ್,5,2025 (www.justkannada.in): ಆರ್.ಸಿ.ಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ 11 ಅಭಿಮಾನಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ದ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದು ದುರ್ಘಟನೆಗೆ ಸರಕಾರ, ಗುಪ್ತಚರ ಇಲಾಖೆ ವೈಫಲ್ಯ ಕಾರಣ ಎಂದು ಆರೋಪಿಸಿದ್ದಾರೆ.
ಇದು ಭದ್ರತಾ ಲೋಪವಲ್ಲ ಆಡಳಿತ ವೈಫಲ್ಯ- ಸಂಸದ ಯದುವೀರ್
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಇದು ಭದ್ರತಾ ಲೋಪವಲ್ಲ ಆಡಳಿತ ವೈಫಲ್ಯ . ಜನರ ಬೆಂಬಲ ಆಚರಣೆಗಳ ಬಗ್ಗೆ ಗೊತ್ತಿದ್ರೂ ತರಾತುರಿಯಲ್ಲಿ ಸರ್ಕಾರ ಕಾರ್ಯಕ್ರಮ ಆಯೋಜನೇ ಮಾಡಿದೆ. ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ರಾಜ್ಯ ಸರ್ಕಾರ ನಿಯೋಜಿತವಾಗಿ ಈ ದುರಂತ ತಡೆಯಬಹುದಿತ್ತು ಹಾಗೂ ತಡೆಯಬೇಕಿತ್ತು. ಸರ್ಕಾರ ಈ ನಿರ್ಲಕ್ಷಕ್ಕೆ ಉತ್ತರ ನೀಡಬೇಕು. ಪುನಃ ಇಂತಹ ಘಟನೆಗಳು ಆಗದಂತೆ ತಡೆಯಬೇಕು. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದಿದ್ದಾರೆ.
ನೈತಿಕ ಹೊಣೆ ಹೊತ್ತು ಸಿಎಂ, ಡಿಸಿಎಂ, ಗೃಹ ಮಂತ್ರಿಗಳು ರಾಜೀನಾಮೆ ಕೊಡಬೇಕಿತ್ತು- ಶಾಸಕ ಶ್ರೀವತ್ಸ
ಕಾಲ್ತುಳಿತ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಶ್ರೀವತ್ಸ, ಇದು ಸರ್ಕಾರದ ನಿರ್ಲಕ್ಷ್ಯ. ಪೂರ್ವ ತಯಾರಿ ಕೊರತೆಯಿಂದಾಗಿ ನಡೆದ ಅವಘಡವಾಗಿದೆ. ಸರ್ಕಾರ ಘಟನೆಯ ನೈತಿಕ ಹೊಣೆ ಹೊರಬೇಕು. 11 ಜನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಬೇಕು. ಮೃತರ ಕುಟುಂಬಕ್ಕೆ ಆಗಿರುವ ನೋವಿನ ಶಾಪ ಇವರಿಗೆ ತಟ್ಟುತ್ತೆ. ಈಗಾಗಲೇ ನೈತಿಕ ಹೊಣೆ ಹೊತ್ತು ಸಿಎಂ, ಡಿಸಿಎಂ, ಗೃಹ ಮಂತ್ರಿಗಳು ರಾಜೀನಾಮೆ ಕೊಡಬೇಕಿತ್ತು ಎಂದರು.
ಕಾರ್ಯಕ್ರಮ ಒಂದು ರೀತಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಂತೆ ಕಾಣುತ್ತಿತ್ತು. ಅವರ ಮಕ್ಕಳು, ಮೊಮ್ಮಕ್ಕಳಿಗೆ ಫೋಟೋ ತೆಗೆಸಿಕೊಳ್ಳಲು ಅವಕಾಶ ಕೊಟ್ಟಿದ್ದರು. ಸಾವಿನ ಹೊಣೆಯನ್ನ ಸಿಎಂ,ಡಿಸಿಎಂ ಹೊರಬೇಕು. ಕರ್ನಾಟಕ ರಾಜ್ಯದ ಮರ್ಯಾದೆಯನ್ನ ದೇಶದಲ್ಲಿ ಕಳೆದಿದ್ದಾರೆ. ಬೇರೆ ರಾಜ್ಯಗಳಲ್ಲಿ ಐಪಿಎಲ್ ಕಪ್ ಗೆದ್ದಾಗ ವ್ಯವಸ್ಥಿತವಾಗಿ ಮಾಡಿದ್ದಾರೆ. ಇಲ್ಲ ತರಾತುರಿಯಲ್ಲಿ ಮಾಡಿರುವುದು ಖಂಡಿಸಬೇಕು. ಮಹಾ ಕುಂಭಮೇಳದಲ್ಲಿ ಆದ ಘಟನೆ ಕುರಿತು ಕಾಂಗ್ರೆಸ್ ಆರೋಪ ಮಾಡಲಿಲ್ವಾ.? ಪೋಲಿಸ್ ಭದ್ರತೆಯನ್ನ ಸರಿಯಾಗಿ ಮಾಡದೆ ಸಂಭ್ರಮಾಚರಣೆಗೆ ಆಹ್ವಾನ ಮಾಡಿರುವುದು ಅವೈಜ್ಞಾನಿಕ ಎಂದು ಹರಿಹಾಯ್ದರು.
ಮೃತರ ಕುಟುಂಬಕ್ಕೆ ಆಗಿರುವ ನೋವು 10 ಲಕ್ಷ ಪರಿಹಾರ ಕೊಟ್ಟರೆ ಮುಗಿಯುತ್ತಾ.? ಪ್ರತಾಪ್ ಸಿಂಹ
ಘಟನೆ ಸಂಬಂಧ ಕಾಲ್ತುಳಿತದಿಂದ ಮೃತ ಕುಟುಂಬಸ್ಥರಿಗೆ ಪರಿಹಾರ ಘೋಷಣೆ ಮಾಡಿರುವ ಕುರಿತು ಟೀಕಿಸಿದ ಸಂಸದ ಪ್ರತಾಪ್ ಸಿಂಹ, ಸರ್ಕಾರದ ವತಿಯಿಂದ 10 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಕೇರಳ ವ್ಯಕ್ತಿ ಆನೆ ತುಳಿತಕ್ಕೊಳಗಾಗಿ ಸತ್ತಾಗ 15 ಲಕ್ಷ ಕೊಡುತ್ತಾರೆ. ಕೋಮು ದ್ವೇಷ, ದಳ್ಳೂರಿಯಲ್ಲಿ ಮೃತ ಪಟ್ಟ ಇವರ ಕಡೆಯವರಿಗೆ 25 ಲಕ್ಷ ಪರಿಹಾರ ಕೊಡುತ್ತಾರೆ. ಇಲ್ಲ ಸಣ್ಣ ವಯಸ್ಸಿನ ಮಕ್ಕಳು, ಇಂಜಿನಿಯರ್ ಮಾಡುವ ವಿದ್ಯಾರ್ಥಿಗಳು ಸತ್ತಿದ್ದಾರೆ. ಅವರ ಕುಟುಂಬಕ್ಕೆ ಆಗಿರುವ ನೋವು 10 ಲಕ್ಷ ಪರಿಹಾರ ಕೊಟ್ಟರೆ ಮುಗಿಯುತ್ತಾ? ಎಂದು ಪ್ರಶ್ನಿಸಿದರು.
ಸಿಎಂ ಮತ್ತು ಡಿಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ- ಬಿಜೆಪಿ ವಕ್ತಾರ ಎಂ ಮೋಹನ್ ಆಗ್ರಹ
ಘಟನೆ ಕುರಿತು ಮಾತನಾಡಿದ ಬಿಜೆಪಿ ವಕ್ತಾರ ಎಂ ಮೋಹನ್, ಸಿಎಂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಇಬ್ಬರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ವಕ್ತಾರ ಮೋಹನ್, ಘಟನೆಗೆ ರಾಜ್ಯ ಸರ್ಕಾರವೇ ನೇರ ಕಾರಣ. ಘಟನೆಯ ನೈತಿಕ ಹೊಣೆ ಹೊತ್ತು ಸಿಎಂ., ಡಿಸಿಎಂ ರಾಜೀನಾಮೆ ನೀಡಬೇಕು. ಕಾಲ್ತುಳಿತದಲ್ಲಿ ಇದುವರೆಗೆ 11 ಮಂದಿ ಸಾವಿಗೀಡಾಗಿದ್ದಾರೆ. ಈ ದುರಂತ ಘಟನೆ ಸರ್ಕಾರದಿಂದಲೇ ಆದಂತಹ ಕೊಲೆ. ಆರ್ ಸಿ ಬಿ ಮ್ಯಾಚ್ ನಡೆಯುವ ಮುಂಚೆ ಗೆಲುವಿಗಾಗಿ ಪೂಜೆ ಪುನಸ್ಕಾರ ನಡೆಯಿತು. ನಂತರ ಅಲಹಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ಗೆಲುವನ್ನು ಸಾಧಿಸಿತು. ಮುಖ್ಯಮಂತ್ರಿಗಳ ಆಣತಿ ಮೇರೆಗೆ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ನಡೆಯಿತು. ವಿಶೇಷ ವಿಮಾನದ ಮೂಲಕ ಆಟಗಾರರನ್ನು ಕರೆಸಿದರು. ರಾತ್ರಿಯೆಲ್ಲ ಡ್ಯೂಟಿ ಮಾಡಿ ಸುಸ್ತಾಗಿದ್ದ ಪೊಲೀಸರಿಗೆ ಮತ್ತೆ ಕೆಲಸ ಮಾಡುವುದು ಕಷ್ಟವಾಯಿತು. ಯಾವುದೇ ರಿಸರ್ವ್ ಪೊಲೀಸ್ ಸಹಾಯ ಪಡೆಯದೇ ಸಂಭ್ರಮಕ್ಕೆ ಮುಂದಾದರು. ಸರ್ಕಾರದ ವೈಫಲ್ಯದಿಂದಲೇ ಈ ದುರ್ಘಟನೆ ನಡೆದಿದೆ ಎಂದು ಆರೋಪಿಸಿದರು.
ಆಟ ಆಡಿದವರೇ ಯಾರೋ, ಆದರೆ ಅದನ್ನ ಸಂಭ್ರಮಿಸುವ ನೆಪದಲ್ಲಿ ಡಿಸಿಎಂ ಆಟಗಾರರು ಬಳಿ ಪೋಸ್ ಕೊಟ್ಟು ಇದರ ಮೂಲಕ ಇನ್ನಷ್ಟು ಪ್ರಚಾರಗಿಟ್ಟಿಸಿಕೊಳ್ಳಲು ಹೋಗಿದ್ದರು. ಇವರ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಿದ್ದು ಮಾತ್ರ ಬಡಪಾಯಿಗಳು. ಈ 11 ಕೊಲೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ. ಸರ್ಕಾರದಿಂದ ವೈಫಲ್ಯವಾಗಿದೆ ಎಂದು ಒಪ್ಪಿಕೊಂಡು ಸ್ವತಃ ತಾವೇ ರಾಜೀನಾಮೆ ಕೊಡಬೇಕು. ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರವನ್ನು ಎಲ್ಲರೂ ಖಂಡಿಸುತಿದ್ದಾರೆ. ಈ ಸರ್ಕಾರದಲ್ಲಿ ನಮಗೆ ನಂಬಿಕೆ ಇಲ್ಲ. ಈ ಸರ್ಕಾರ ಹಣ ಹೊಡೆಯುವ ಸರ್ಕಾರ, ಹೆಣ ಬೀಳಿಸುವ ಸರ್ಕಾರ ಎಂದು ಎಂ ಮೋಹನ್ ಆಕ್ರೋಶ ವ್ಯಕ್ತಪಡಿಸಿದರು.
Key words: Stampede, incident, Failure, government, BJP
The post ಕಾಲ್ತುಳಿತ ದುರ್ಘಟನೆ: ಸರಕಾರ, ಗುಪ್ತಚರ ಇಲಾಖೆ ವೈಫಲ್ಯ- ಬಿಜೆಪಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




