29
June, 2026

A News 365Times Venture

29
Monday
June, 2026

A News 365Times Venture

ಬೆಂಗಳೂರಿನಿಂದ 100 ಕಿ.ಮೀ. ದೂರದ ಸ್ಥಳಗಳಿಗೆ ಚತುಷ್ಪಥ ರೈಲ್ವೆ-ಕೇಂದ್ರ ಸಚಿವ ವಿ. ಸೋಮಣ್ಣ

Date:

ಬೆಂಗಳೂರು,ಜೂನ್,29,2026 (www.justkannada.in):  ಬೆಂಗಳೂರಿನಿಂದ 100 ಕಿ.ಮೀ. ಸುತ್ತಮುತ್ತ ಇರುವ ನಗರಗಳಿಗೆ ಚತುಷ್ಪಥ ರೈಲ್ವೆ ಮಾರ್ಗಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಜತೆಗೆ ರಾಜಧಾನಿಯಿಂದ ಕರಾವಳಿ ಭಾಗದ ಮಂಗಳೂರಿಗೆ ಕೂಡ ಇದೇ ರೀತಿ ಚತುಷ್ಪಥ ಮಾರ್ಗ ಅಭಿವೃದ್ಧಿಯನ್ನೂ ಪರಿಗಣಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ಎಲೆಕೇರಿ ಬಳಿ ನೂತನವಾಗಿ ನಿರ್ಮಿಸಿರುವ ರಸ್ತೆ ಮೇಲ್ಸೇತುವೆ ಉದ್ಘಾಟಿಸಿ ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿದರು.

ಇದಕ್ಕೂ ಮೊದಲು ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ ಅವರು ಕರ್ನಾಟಕದ ರೈಲ್ವೇ ಬೇಡಿಕೆಗಳನ್ನು ಸಮಾರಂಭದಲ್ಲಿ ಪ್ರಸ್ತಾಪಿಸಿದ್ದರು. ಇದರಲ್ಲಿ ಅವರು ಬೆಂಗಳೂರಿನಿಂದ ತುಮಕೂರು, ಮೈಸೂರು, ಗೌರಿಬಿದನೂರು ಮಾರ್ಗವಾಗಿ ಹಿಂದೂಪುರ ಮತ್ತು ಕೋಲಾರಕ್ಕೆ ಚತುಷ್ಪಥ ಹಳಿ ನಿರ್ಮಿಸಬೇಕು ಎಂದು ಕೋರಿದ್ದರು.

ಈ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸೋಮಣ್ಣ, ಬೆಂಗಳೂರು-ತುಮಕೂರು ಚತುಷ್ಪಥ ಮಾರ್ಗದ ಸರ್ವೆ ಮುಗಿದಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು. ಮುಂದಿನ ಒಂದೂವರೆ- ಎರಡು ವರ್ಷದಲ್ಲಿ ಕಾಮಗಾರಿ ಮುಗಿಸುವ ಉದ್ದೇಶ ಇದೆ. ಹಾಗೆಯೇ ಬೆಂಗಳೂರು- ಮೈಸೂರು ಚತುಷ್ಪಥ ನಿರ್ಮಾಣಕ್ಕೆ ಸಮೀಕ್ಷೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.

ಎಂ‌ ಬಿ ಪಾಟೀಲರು ಪ್ರಸ್ತಾಪಿಸಿರುವ ಬೇಡಿಕೆಗಳು ಸರಿಯಾಗಿವೆ. ಅವರ ಕೋರಿಕೆಯಂತೆ ಬೆಂಗಳೂರು-ಕೋಲಾರ ನಡುವೆ ನೇರ ರೈಲು ಸಂಪರ್ಕ ಕಲ್ಪಿಸಲಾಗುವುದು. ಸದ್ಯಕ್ಕೆ ವೈಟ್ ಫೀಲ್ಡ್ ತನಕ ಇರುವ ನಾಲ್ಕು ಪಥದ ಮಾರ್ಗವನ್ನು ಮುಂದಕ್ಕೂ ಕೊಂಡೊಯ್ಯಲಾಗುವುದು. ಇದಕ್ಕೆ ಬೇಕಾದ ಭೂಸ್ವಾಧೀನವನ್ನು ಕೇಂದ್ರ ಸರ್ಕಾರವೇ ನಡೆಸುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.

ಬೆಂಗಳೂರು-ಮಂಗಳೂರು ಚತುಷ್ಪಥ ಮಾರ್ಗ

ರಾಜಧಾನಿ ಬೆಂಗಳೂರಿನಿಂದ ಕರಾವಳಿಯ ಮಂಗಳೂರಿಗೆ ತ್ವರಿತ ರೈಲು ಸಂಚಾರ ವ್ಯವಸ್ಥೆ ಆಗಬೇಕಿದೆ. ಇದಕ್ಕಾಗಿ ಸಕಲೇಶಪುರ-ಗುಂಡ್ಯ ನಡುವೆ ಸಮಾನಾಂತರವಾಗಿ ರಸ್ತೆ ಮತ್ತು ರೈಲು ಮಾರ್ಗ ಆಗಬೇಕೆಂದು ಎಂ.ಬಿ ಪಾಟೀಲ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಸ್ಪಂದಿಸಿದ ಸೋಮಣ್ಣ ಅವರು ಇದೊಂದು ಉಪಯುಕ್ತ ಸಲಹೆಯಾಗಿದ್ದು, ಈ ಎರಡೂ ನಗರಗಳ ನಡುವೆ ಚತುಷ್ಪಥ ರೈಲು ಮಾರ್ಗ ಅಭಿವೃದ್ಧಿ ಅಗತ್ಯ ಇದೆ. ಬಂದರು ನಗರ ಮಂಗಳೂರಿಗೆ ಸಂಪರ್ಕ ಮಾಡುವುದರಿಂದ ಅನೇಕ ಪ್ರಯೋಜನಗಳು ಆಗಲಿವೆ. ಇದು ಕೂಡ ನಮ್ಮ ಆದ್ಯತೆಯಾಗಿದೆ ಎಂದು ಸೋಮಣ್ಣ ವಿವರಿಸಿದ್ದಾರೆ.

ತುಮಕೂರು- ಚಿತ್ರದುರ್ಗ- ದಾವಣಗೆರೆ ಮಾರ್ಗದಲ್ಲಿ ಭರದಿಂದ ಕಾಮಗಾರಿ ನಡೆಯುತ್ತಿದೆ. ಈಗ ಏಕಪಥವಾಗಿರುವ ಈ ಮಾರ್ಗವನ್ನು ಜೋಡಿಹಳಿ ಮಾಡಬೇಕು ಎಂದು ಪಾಟೀಲರು ಬೇಡಿಕೆ ಇಟ್ಟಿದ್ದಾರೆ. ಇದನ್ನು ಕೂಡ ಪರಿಗಣಿಸಲಾಗುವುದು ಎಂದು ವಿ. ಸೋಮಣ್ಣ ಅವರು ನುಡಿದಿದ್ದಾರೆ.

ಸಚಿವರಿಬ್ಬರು ವಿಶೇಷ ರೈಲಿನಲ್ಲಿ ಪ್ರಯಾಣ

ರೈಲ್ವೆ ಮೂಲಸೌಕರ್ಯದ ಗುಣಮಟ್ಟ, ಸುರಕ್ಷತೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲು ಬಳಸಲಾಗುವ SPIC (Self-Propelled Inspection Car) ಎಂಬ ವಿಶೇಷ ರೈಲ್ವೆ ಪರಿಶೀಲನಾ ವಾಹನದಲ್ಲಿ ಇಬ್ಬರೂ ಸಚಿವರು (ಸೋಮಣ್ಣ, ಪಾಟೀಲ) ಪ್ರಯಾಣಿಸಿದರು. ಬೆಂಗಳೂರು ರೈಲ್ವೆ ನಿಲ್ದಾಣದಿಂದ ಚನ್ನಪಟ್ಟಣದವರೆಗೆ ಪ್ರಯಾಣ ಬೆಳೆಸಿದರು. ಬಳಿಕ ಅದೇ ರೈಲಿನಲ್ಲಿ ವಾಪಸ್ಸಾದರು.

ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪ್ರಗತಿಯಲ್ಲಿರುವ ಹಾಗೂ ಪ್ರಸ್ತಾವಿತ ರೈಲ್ವೆ ಯೋಜನೆಗಳ ಕುರಿತು ಪಾಟೀಲ ಅವರು ರೈಲ್ವೆ ಸಚಿವರ ಜತೆ ಚರ್ಚೆ ನಡೆಸಿದರು. ಈ ಕುರಿತ ಪತ್ರ ಕೂಡ ಪಾಟೀಲ ಅವರು ರೈಲ್ವೆ ಸಚಿವರಿಗೆ ಹಸ್ತಾಂತರ ಮಾಡಿದರು.

ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ರೈಲು

ಕಿತ್ತೂರು ಕರ್ನಾಟಕ ಭಾಗದ ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಬೇಕು ಎನ್ನುವ ಸಚಿವ ಎಂ.ಬಿ.ಪಾಟೀಲ ಅವರ ಬೇಡಿಕೆಗೆ ಸ್ಪಂದಿಸಿದ ಸೋಮಣ್ಣ ಅವರು ಇನ್ನು 3-4 ತಿಂಗಳಲ್ಲಿ ಅದು ನನಸಾಗಲಿದೆ ಎಂದು ಘೋಷಿಸಿದರು.

ವಂದೇ ಭಾರತ್ ರೈಲಿಗೆ ಬದಲಾಗಿ ಸ್ಲೀಪರ್ ರೈಲು ಓಡಿಸಲಾಗುವುದು. ಈ ಕುರಿತು ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಅಲ್ಲದೆ, ಬೆಂಗಳೂರು- ವಿಜಯಪುರ ನಡುವೆ ವಾರಕ್ಕೆ ಎರಡು ಸಲ ಸಂಚರಿಸುತ್ತಿರುವ ವಿಶೇಷ ರೈಲನ್ನು ಕಾಯಂ ಮಾಡಲಾಗುವುದು. ಜತೆಗೆ ಇಲ್ಲಿರುವ ಸಣ್ಣಪುಟ್ಟ ತೊಂದರೆಗಳನ್ನು ನಿವಾರಿಸಲಾಗುವುದು. ಅಲ್ಲದೆ ಐಟಿ ರಾಜಧಾನಿ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ ಮುಂಬಯಿಯನ್ನು ಬೆಸೆಯಲು ಬೆಂಗಳೂರು-ಪುಣೆ ಮಧ್ಯೆ ಹೈಸ್ಪೀಡ್ ರೈಲು ಆರಂಭಿಸಬೇಕು ಎನ್ನುವ ಬೇಡಿಕೆ ಸೂಕ್ತವಾಗಿದೆ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಸೋಮಣ್ಣ ತಿಳಿಸಿದರು.

ಸಚಿವರಿಂದ ರಾಮೋಹಳ್ಳಿ ರೈಲ್ವೆ ಸೇತುವೆ ಕಾಮಗಾರಿ ವೀಕ್ಷಣೆ

ಚನ್ನಪಟ್ಟಣಕ್ಕೆ ತೆರಳುವ ಮಾರ್ಗದ ಮಧ್ಯದಲ್ಲಿ,ಕೇಂದ್ರ ಸಚಿವ ಸೋಮಣ್ಣ ಮತ್ತು ಸಚಿವ ಎಂ. ಬಿ ಪಾಟೀಲ್ ಇಬ್ಬರೂ ಬೆಂಗಳೂರು ನಗರದ ಕುಂಬಳಗೋಡಿನ ಸಮೀಪದ ರಾಮೋಹಳ್ಳಿಯಲ್ಲಿ ನಡೆಯುತ್ತಿರುವ ರೈಲ್ವೆ ಕೆಳ ಸೇತುವೆಯ ಕಾಮಗಾರಿಗಳನ್ನು ವೀಕ್ಷಿಸಿ, ಅಗತ್ಯ ಸೂಚನೆಗಳನ್ನು ನೀಡಿದರು. ಮಳೆ ನೀರು ನಿಲ್ಲದಂತೆ ನಿಗಾ ವಹಿಸಿ ಕಾಮಗಾರಿ ಮುಗಿಸಲು ಇಬ್ಬರೂ ಸಚಿವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ, ಶಾಸಕ ಸಿ ಪಿ ಯೋಗೀಶ್ವರ್, ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ ಗುರಿಕಾರ್, ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಎ.ಕೆ.ಗುಪ್ತ, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ಪ್ರವೀಣ್ ಕಾತರಕಿ, ಮೂಲಸೌಕರ್ಯ ಇಲಾಖೆ ಜಂಟಿ ಕಾರ್ಯದರ್ಶಿ ಚಂದ್ರಶೇಖರ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

key words: Four-track, railway,  places, 100 km, Bengaluru-Union Minister, V. Somanna

 

The post ಬೆಂಗಳೂರಿನಿಂದ 100 ಕಿ.ಮೀ. ದೂರದ ಸ್ಥಳಗಳಿಗೆ ಚತುಷ್ಪಥ ರೈಲ್ವೆ-ಕೇಂದ್ರ ಸಚಿವ ವಿ. ಸೋಮಣ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಿದ್ಯುತ್ ನಿಗಮಗಳ ಖಾಸಗೀಕರಣ ಬೇಡ ಎನ್ನುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು, ಜೂನ್,29,2026 (www.justkannada.in): “ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡದಿರುವ ವಿಚಾರವಾಗಿ ನಾನೊಬ್ಬನೇ...

ಬಿಡದಿ ಟೌನ್ ಶಿಪ್ ವಿರುದ್ದ ಹೋರಾಟ: ಸರ್ಕಾರಕ್ಕೆ ಯಾವುದೇ ಪರಿಣಾಮವಾಗಲ್ಲ- ಸಚಿವ ಎಂ.ಬಿ ಪಾಟೀಲ್

ರಾಮನಗರ,ಜೂನ್,29,2026 (www.justkannada.in):  ಬಿಡದಿ ಟೌನ್ ಶಿಪ್ ನಿರ್ಮಾಣ ವಿರುದ್ದ ರೈತರ ಜೆಡಿಎಸ್...

ಶಾಸಕ ಪ್ರದೀಪ್ ಈಶ್ವರ್ ಗೆ ಚಪ್ಪಲಿ ಎಸೆತ ಕೇಸ್:  ಮತ್ತೆ ಐವರು ಆರೋಪಿಗಳ ಬಂಧನ

ಚಿಕ್ಕಬಳ್ಳಾಪುರ,ಜೂನ್,29,2026 (www.justkannada.in): ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಮೆರವಣಿಗೆ ವೇಳೆ ಕಾಂಗ್ರೆಸ್ ಶಾಸಕ...

ಮೈಸೂರು : ಅಡಿಕೆ ತೋಟಕ್ಕೆ ಸರಣಿ ಕಳ್ಳರ ಕಾಟ; ನೂರಾರು ಮರಗಳ ಹೋಂಬಾಳೆ ಕತ್ತರಿಸಿ ಪರಾರಿ

ಮೈಸೂರು, ಜೂನ್,29,2026 (www.justkannada.in): ಮೈಸೂರು ಸಮೀಪದ ಕಳಲವಾಡಿ ಗ್ರಾಮದ ರೈತ ರವೀಂದ್ರರೆಡ್ಡಿ...