ಮೈಸೂರು,ಜೂನ್,27,2025 (www.justkannada.in): ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಬಿ. ಚಂದ್ರಶೇಖರ್ ಅವರಿಗೆ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಇಲ್ಲಿ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಹೆಚ್ಚು ಗಮನಹರಿಸಲು ಅಧ್ಯಾಪಕರಿಗೆ ಕರೆ ನೀಡಿದರು.
ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಾಗಿ ಆದ ಬದಲಾವಣೆ ಯುವ ಜನರಲ್ಲಿ ಪಲ್ಲಟ ಉಂಟು ಮಾಡಿದೆ. ಹಾಗಾಗಿ, ಶಿಸ್ತು, ಕಡ್ಡಾಯ ಹಾಜರಾತಿ ಮತ್ತು ಮೌಲಿಕ ಶಿಕ್ಷಣ ಹಾಗೂ ಸಂಬಂಧಿತ ವಿಷಯಗಳ ಕುರಿತು ಅರಿವು ಮೂಡಿಸುವಂತೆ ಅಧ್ಯಾಪಕರಿಗೆ ಕರೆ ನೀಡಿದರು.
ಬೀಳ್ಕೊಡುಗೆ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ. ಬಿ. ಚಂದ್ರಶೇಖರ್ ಅವರು, ಸರ್ಕಾರದ ಅನುಮತಿ ಮತ್ತು ಸವಲತ್ತು ಪಡೆಯಲು ಕಾಯದೆ, ಸ್ಥಳೀಯ ಜನರು, ಜನಪ್ರತಿನಿಧಿಗಳು, ಸಂಸ್ಥೆ ಹಾಗೂ ಇತರ ಲಭ್ಯ ಸಹಕಾರ ಪಡೆದು ವಿದ್ಯಾರ್ಥಿ ಸ್ನೇಹಿ ಸೌಲಭ್ಯ ಒದಗಿಸಲು ಕ್ರಮ ವಹಿಸಲು ಸಲಹೆ ನೀಡಿದರು. ತಮ್ಮ ಸೇವಾವಧಿ ಅನುಭವ ಹಂಚಿಕೊಂಡ ಅವರು, ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರೊ. ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಪ್ರೊ. ಪುಟ್ಟರಾಜು, ಪತ್ರಾಂಕಿತ ವ್ಯವಸ್ಥಾಪಕ ಅರವಿಂದ ಎಂ. ಪಿ. ಪ್ರೊ.ಅಬ್ದುಲ್ ರಹಿಮಾನ್ ಎಂ, ಲತಾ ಚಂದ್ರಶೇಖರ್, ಸಹಾಯಕ ಜಂಟಿ ನಿರ್ದೇಶಕರಾದ ಎ.ಬಿ ನಾಗೇಂದ್ರ ಪ್ರಸಾದ್, ನಾಗರತ್ನಮ್ಮ, ಲೆಕ್ಕಾಧಿಕಾರಿ ರಮೇಶ್, ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಧ್ಯಾಪಕರು, ಅಧ್ಯಾಪಕೇತರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Key words: Retirement, farewell , Joint Director , Department of College Education, Mysore
The post ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಿಗೆ ವಯೋನಿವೃತ್ತಿ ಬೀಳ್ಕೊಡುಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.