ಮೈಸೂರು,ಸೆಪ್ಟಂಬರ್,7,2026 (www.justkannada.in): ರೂಪನಗರ ಲೇಔಟ್ ನ ಕುಡಿಯುವ ನೀರನ್ನು ಪಕ್ಕದ ಕಾವೇರಿ ನಗರ ಲೇ ಔಟ್ ಗೆ ತಿರುಗಿಸಲು ಬೋಗಾದಿ ಪಟ್ಟಣ ಪಂಚಾಯಿತಿ ಕೈಗೊಂಡಿರುವ ಕ್ರಮಕ್ಕೆ ರೂಪನಗರ ನಿವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುಮಾರು 260 ಎಕರೆ ವಿಸ್ತೀರ್ಣದ ರೂಪನಗರದಲ್ಲಿ 2,500ಕ್ಕೂ ಹೆಚ್ಚು ನಿವಾಸಿಗಳು ವಾಸಿಸುತ್ತಿದ್ದು, 2,500 ನಿವೇಶನಗಳು ಹಾಗೂ ಸುಮಾರು 900 ಮನೆಗಳಿವೆ. ಲೇಔಟ್ನಲ್ಲಿ 5 ಮೇಲ್ಮಟ್ಟದ ನೀರಿನ ಟ್ಯಾಂಕ್ಗಳು ಮತ್ತು 4 ನೆಲಮಟ್ಟದ ಟ್ಯಾಂಕ್ ಗಳು ಇದ್ದು, ನಿವಾಸಿಗಳ ನೀರಿನ ಅಗತ್ಯಕ್ಕಾಗಿ ಹಲವು ವರ್ಷಗಳಿಂದ ಸ್ವಂತ ನೀರಿನ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗಿದೆ.
ಆದರೆ ಇದೀಗ ಪಕ್ಕದ ಕಾವೇರಿ ನಗರದಲ್ಲಿ ಸುಮಾರು 70 ಮನೆಗಳಿದ್ದು, ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ರೂಪನಗರದ ಮೇಲ್ಮಟ್ಟದ ಟ್ಯಾಂಕ್ ಗಳಿಗೆ ಸಂಪರ್ಕ ಕಲ್ಪಿಸಿ ನೀರು ಪೂರೈಸಲು ಪಟ್ಟಣ ಪಂಚಾಯಿತಿ ಕಾಮಗಾರಿ ಆರಂಭಿಸಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಈಗಾಗಲೇ ರೂಪನಗರದಲ್ಲೇ ನೀರಿನ ಸಮಸ್ಯೆ ಎದುರಾಗಿದೆ. ಒಟ್ಟು 24 ಬೋರ್ ವೆಲ್ ಗಳ ಪೈಕಿ 18 ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಅಂತರ್ಜಲ ಕುಸಿತದಿಂದ ಅವುಗಳ ಸಾಮರ್ಥ್ಯವೂ ಸುಮಾರು ಶೇ.50ಕ್ಕೆ ಇಳಿದಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ಕಾವೇರಿ ನಗರದಲ್ಲಿ ಸಮರ್ಪಕ ನೀರಿನ ಮೂಲಸೌಕರ್ಯ ಕಲ್ಪಿಸದೆ ಹೊಸ ಮನೆಗಳಿಗೆ ಅನುಮತಿ ನೀಡಿರುವ ಆಡಳಿತ, ಇದೀಗ ರೂಪನಗರದ ನೀರನ್ನು ಬಳಸಿಕೊಳ್ಳಲು ಮುಂದಾಗಿರುವುದು ಅನ್ಯಾಯದ ಕ್ರಮ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನೀರಿನ ಕೊರತೆಯಿರುವ ಒಂದು ಪ್ರದೇಶದ ನೀರನ್ನು ಮತ್ತೊಂದು ಪ್ರದೇಶಕ್ಕೆ ತಿರುಗಿಸುವ ಬದಲು, ಆಡಳಿತ ಹೊಸ ನೀರಿನ ಮೂಲಗಳನ್ನು ಸೃಷ್ಟಿಸಬೇಕು. ರೂಪನಗರದ ನೀರಿನ ಮೂಲಸೌಕರ್ಯವನ್ನು ಇಲ್ಲಿನ ನಿವಾಸಿಗಳೇ ಅಭಿವೃದ್ಧಿಪಡಿಸಿದ್ದಾರೆ” ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ನೀರಿನ ತಿರುವು ಮುಂದುವರಿದರೆ ಮುಂದಿನ ದಿನಗಳಲ್ಲಿ ರೂಪನಗರದಲ್ಲೂ ತೀವ್ರ ಕುಡಿಯುವ ನೀರಿನ ಬಿಕ್ಕಟ್ಟು ಎದುರಾಗುವ ಆತಂಕವಿದೆ ಎಂದು ನಿವಾಸಿಗಳು ಎಚ್ಚರಿಸಿದ್ದಾರೆ.
Key words: Mysore, Residents, , diversion, Cauvery water, Rupnagar,
The post ರೂಪನಗರದ ನೀರು ಕಾವೇರಿ ನಗರಕ್ಕೆ ತಿರುವು: ನಿವಾಸಿಗಳ ತೀವ್ರ ವಿರೋಧ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




