ಬೆಂಗಳೂರು,ಮೇ,22,2026 (www.justkannada.in): ಕಲ್ಯಾಣ ಕರ್ನಾಟಕ ಭಾಗದ ಬೀದರ್ ಮತ್ತು ಕಲಬುರಗಿ ಜಿಲ್ಲಾ ಕೇಂದ್ರಗಳಿಗೆ ಕ್ರಮವಾಗಿ ಜೂನ್ 1 ಮತ್ತು ಜೂನ್ 10ರಿಂದ ಬೆಂಗಳೂರಿನಿಂದ ವಿಮಾನಯಾನ ಸೇವೆಯನ್ನು ಪುನಾರಂಭ ಮಾಡಲಾಗುತ್ತಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್ ಅವರು, ಸ್ಟಾರ್ ಏರ್ ಲೈನ್ಸ್ (ಘೋಡಾವತ್ ಎಂಟರ್ಪ್ರೈಸಸ್ ಲಿಮಿಟೆಡ್) ಸಂಸ್ಥೆಯು ಬೆಂಗಳೂರು-ಬೀದರ್- ಬೆಂಗಳೂರು ಮತ್ತು ಬೆಂಗಳೂರು- ಕಲಬುರಗಿ- ಬೆಂಗಳೂರು ಮಾರ್ಗದಲ್ಲಿ ವಿಮಾನಯಾನ ಸೇವೆಯನ್ನು ಒದಗಿಸಲಿದೆ. ಇದಕ್ಕೆ ಬೆಂಬಲ ನೀಡಲು ಸರಕಾರವು 28.47 ಕೋಟಿ ರೂ.ಗಳನ್ನು ‘ವಯಬಲಿಟಿ ಗ್ಯಾಪ್ ಫಂಡಿಂಗ್’ ಆಗಿ ಕೊಡುತ್ತಿದೆ. ಎರಡೂ ಕಡೆಯ ವಿಮಾನ ಪ್ರಯಾಣಕ್ಕೆ ಈಗಾಗಲೇ ಮುಂಗಡ ಬುಕಿಂಗ್ ಕೂಡ ಆರಂಭವಾಗಿದೆ ಎಂದಿದ್ದಾರೆ.
ಕಲಬುರಗಿಗೆ ಇದ್ದ ವಿಮಾನ ಸೇವೆಯು ನಷ್ಟದ ಕಾರಣ ಸ್ಥಗಿತಗೊಂಡಿತ್ತು. ಬೀದರ್ ಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವಿಶೇಷ ನೆರವಿನಿಂದ ಒಂದು ವಿಮಾನ ಓಡಾಡುತ್ತಿತ್ತು. ಸರಕಾರವು ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕೆ, ಶಿಕ್ಷಣ, ಪ್ರವಾಸೋದ್ಯಮ, ಕೃಷಿ, ವಾಣಿಜ್ಯ ವಹಿವಾಟು ಇತ್ಯಾದಿಗಳ ಬೆಳವಣಿಗೆಯನ್ನು ಪರಿಗಣಿಸಿ ಪ್ರಾದೇಶಿಕ ವಿಮಾನಯಾನ ಸಂಪರ್ಕ ಉಪಕ್ರಮದಡಿ ವಿಮಾನಸೇವೆಯನ್ನು ಮತ್ತೆ ಆರಂಭಿಸುತ್ತಿದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ.
ರಾಜ್ಯದ 2 ಮತ್ತು 3ನೇ ಸ್ತರದ ನಗರಗಳಿಗೆ ವಿಮಾನ ಸಂಪರ್ಕ ಒದಗಿಸಬೇಕು ಎನ್ನುವುದು ಸರಕಾರದ ಕಾಳಜಿಯಾಗಿದೆ. ಇದರಿಂದ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಜತೆಗೆ ಮೂಲಸೌಕರ್ಯ ಕೂಡ ಸುಧಾರಿಸಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಬೀದರ್ ಮತ್ತು ಕಲಬುರಗಿಗೆ ವಿಮಾನಸೇವೆಯ ಮರುಆರಂಭಕ್ಕೆಂದು ಸಚಿವರು ಇತ್ತೀಚೆಗೆ ಕಲ್ಯಾಣ ಕರ್ನಾಟಕ ಭಾಗದ ಸಚಿವ ಸಹೋದ್ಯೋಗಿಗಳು ಮತ್ತು ಹಲವು ವಿಮಾನಯಾನ ಸಂಸ್ಥೆಗಳ ಪ್ರಮುಖರ ಜತೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
Key words: flight service, Bidar, Kalburgi, Minister, MB Patil
The post ಜೂ.1 ಮತ್ತು 10 ರಂದು ಬೀದರ್, ಕಲ್ಬುರ್ಗಿಗೆ ಬೆಂಗಳೂರಿನಿಂದ ವಿಮಾನ ಸೇವೆ ಪುನಾರಂಭ- ಸಚಿವ ಎಂ.ಬಿ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




