ಮೈಸೂರು,ಆಗಸ್ಟ್,7,2026 (www.justkannada.in): ತಮಿಳುನಾಡಿಗೆ ನೀರು ಬಿಡುದಂತೆ ಆಗ್ರಹಿಸಿ ಆಗಸ್ಟ್ 13 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಅನ್ನು ಮುಂದೂಡುವುದು ಸೂಕ್ತ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕರ್ನಾಟಕ ನೆಲ ಜಲ ಸಂರಕ್ಷಣಾ ಸಮಿತಿ ಸಂಚಾಲಕ ಕುರುಬುರ್ ಶಾಂತಕುಮಾರ್ ತಿಳಿಸಿದ್ದಾರೆ.
ಇಂದು ನಡೆದ ಕರ್ನಾಟಕ ನೆಲ ಜಲ ಪರಿಸರ ಸಂರಕ್ಷಣಾ ಸಮಿತಿ ಸಭೆಯಲ್ಲಿ ಚರ್ಚಿಸಿ ಹಲವು ನಿರ್ಣಯಗಳನ್ನ ಕೈಗೊಳ್ಳಲಾಗಿದ್ದು, ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಕುರುಬೂರು ಶಾಂತಕುಮಾರ್, ಕಳೆದ ಒಂದು ವಾರದಲ್ಲಿ ಕಬಿನಿಯಿಂದ ಕನಿಷ್ಠ 15ಟಿಎಂಸಿ ನೀರು ತಮಿಳುನಾಡಿಗೆ ಬಿಡಲಾಗಿದೆ. ಈಗಲೂ ಪ್ರತಿನಿತ್ಯ 2 ಟಿಎಂಸಿ ಹೆಚ್ಚುವರಿ ನೀರು ಬಿಡಲಾಗುತ್ತಿದೆ. ಕಾವೇರಿ ಸಿಡಬ್ಲ್ಯುಎಂಎ ಆದೇಶ 4.5 ಟಿಎಂಸಿ 15 ದಿನದಲ್ಲಿ ಬಿಡಬೇಕು ಎನ್ನುವ ತೀರ್ಮಾನಕ್ಕಿಂತ ಹೆಚ್ಚು ನೀರು ಹರಿಸಲಾಗಿದೆ. ಈಗ ಕೆ ಆರ್ ಎಸ್ ಜಲಾಶಯದಲ್ಲಿ ನೀರು 106 ಆಡಿಗೆ ಏರಿಕೆಯಾಗಿದೆ. ಕಾಲುವೆಗಳಿಗೆ ನೀರು ಹರಿಸಲಾಗಿದೆ. ರೈತರು ವ್ಯವಸಾಯ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ರೈತರ ಹಾಗೂ ಜನರ ಹಿತಕ್ಕಾಗಿ ಮಾಡುವ ಕರ್ನಾಟಕ ಬಂದ್ ಸದ್ಯಕ್ಕೆ ಮುಂದೂಡುವುದು ಸೂಕ್ತ. ಈ ಬಗ್ಗೆ ಚಳುವಳಿಗಾರರು ವಿಶಾಲ ತಳದಿಯ ಮೇಲೆ ಚಿಂತನೆ ನಡೆಸಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು ಎಂದರು.
ಮೇಕೆದಾಟು ನಿರ್ಮಾಣ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಸೌಹಾರ್ದಯುತವಾಗಿ ಮಾತುಕತೆ ನಡೆಸಿ. ಎರಡು ರಾಜ್ಯದ ಪರಿಣಿತರು ಹಾಗೂ ರೈತ ಮುಖಂಡರು ಒಳಗೊಂಡಂತೆ ಸಮನ್ವಯ ಸಮಿತಿ ರಚಿಸಬೇಕು. ಈ ಸಮಿತಿಯ ಮೂಲಕ ಸಂಕಷ್ಟ ಕಾಲದಲ್ಲಿ ತುರ್ತು ಸಭೆ ನಡೆಸಿ ಚರ್ಚಿಸಲು ಅನುಕೂಲವಾಗುತ್ತದೆ ಈ ದಿಕ್ಕಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಲಿ ಎಂದು ಸಲಹೆ ನೀಡಿದರು.
ಕಾವೇರಿಯ ಸಂಕಷ್ಟ ಕಾಲದಲ್ಲಿ ಜೀವಕಳೆ ನೀಡಿರುವ ಸರ್ಕಾರಕ್ಕೆ ಮುಜುಗರ ತಪ್ಪಿಸಿರುವ ಕಬಿನಿ ಜಲಾಶಯ ಬಾಗಿನ ಪೂಜೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೂಡಲೇ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ರೈತರೇ ಈ ಕಾರ್ಯ ನಡೆಸಬೇಕಾಗುತ್ತದೆ ಎಂದು ಎಚ್ಚರಿಸುತಿದ್ದೇವೆ ಎಂದರು.
ಕಬಿನಿ ಹೇಮಾವತಿ ಹಾರಂಗಿ ಕೆ ಆರ್ ಎಸ್ ಅಚ್ಚುಕಟ್ಟು ನಾಲೆಗಳಿಗೆ ರೈತರ ವ್ಯವಸಾಯ ಚಟುವಟಿಕೆಗಳಿಗೆ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ಕಾವೇರಿ ನೀರಿನ ಹೋರಾಟ ರೈತಪರ ಹೋರಾಟ ಕನ್ನಡ ಚಳುವಳಿ ಹೋರಾಟ ಮಾಡಿರುವ ಮುಖಂಡರ ಮೇಲೆ ಇರುವ ಎಲ್ಲಾ ಪೊಲೀಸ್ ಮೊಕದ್ದಮೆ ಕೂಡಲೇ ವಾಪಸ್ ಪಡೆಯಬೇಕು. ಬೆಂಗಳೂರಿನಲ್ಲಿ ವಾಸ ಮಾಡುವ ವಿವಿಧ ರಾಜ್ಯಗಳ ಪರಭಾಷಿಕರು ರಾಜ್ಯದ ನೆಲ ಜಲ ವಿಚಾರ ಬಂದಾಗ ನಿರ್ಲಕ್ಷ್ಯ ಮನೋಭಾವನೆ ತೋರದೆ ನಾಡಿನ ಜನ ಹಿತಕ್ಕಾಗಿ ಸಕ್ರಿಯವಾಗಿ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಕರ್ನಾಟಕ ನೆಲ ಜಲ ಸಂರಕ್ಷಣ ಸಮಿತಿಯ ಸಂಚಾಲಕ ಹಾಗೂ ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು ಮಾತನಾಡಿ ನಾಡಿನ ಹಿತಕ್ಕಾಗಿ ಎಲ್ಲಾ ಪಕ್ಷಗಳ ಎಂಎಲ್ ಎ, ಎಂಪಿಗಳು ಒಂದಾಗಿ ಹೋರಾಟ ಮಾಡುವುದು ಒಳ್ಳೆಯದು. ಎಂದರು. ಬಂದ್ ಆಚರಣೆ ಮಾಡುವ ಸಂದರ್ಭ ಇದಲ್ಲ ನಮ್ಮ ಜನರಿಗೆ ನಾವೇ ತೊಂದರೆ ಕೊಡುವುದು ಸೂಕ್ತವೂ ಅಲ್ಲ. ಮೇಕೆದಾಟು ಎತ್ತಿನಹೊಳೆ ಮಹದಾಯಿ ನೀರಿನ ಹೋರಾಟಕ್ಕೆ ಸಮಗ್ರ ಕರ್ನಾಟಕ ಒಂದಾಗಿ ಹೋರಾಟ ಮಾಡಬೇಕು ಎಂದರು.
ಸಭೆಯಲ್ಲಿ ಜಿ ನಾರಾಯಣ ಕುಮಾರ್, ಕನ್ನಡ ಚಳುವಳಿಯ ಗುರುದೇವ ನಾರಾಯಣ ಕುಮಾರ್, ರೈತ ಮುಖಂಡರುಗಳಾದ ಮಂಡ್ಯ ರಾಜ್ಯ ರೈತ ಸಂಘದ ಜಿಲ್ಲೆಯ ಮಂಜೇಶ್ ಗೌಡ, ರಾಜ್ಯ ಕಬ್ಬು ಬೆಳೆಗಾರ ಸಂಘದ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಗ್ರೀನ್ ಬಟ್ ಆಗ್ರೋ ಠೇವಣಿದಾರರ ರಾಜ್ಯ ಕಾರ್ಯದರ್ಶಿ ಬರಡನಪುರ ನಾಗರಾಜ್, ಪೋಷಕರ ಸಂಘದ ರಾಜ್ಯಾಧ್ಯಕ್ಷ ಯೋಗಾನಂದ, ಕಬಿನಿ ರೈತ ಹಿತರಕ್ಷಣ ಸಮಿತಿ ಅಧ್ಯಕ್ಷ ಗೌರಿ ಶಂಕರ, ಚಿಕ್ಕಬಳ್ಳಾಪುರ ಅಧ್ಯಕ್ಷ ಶ್ರೀನಿವಾಸ್ಲು ಬೈರಾರೆಡ್ಡಿ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷ ನರಸ ರೆಡ್ಡಿ, ಜಲ ಜಾಗೃತಿ ಸಮಿತಿ ಅಧ್ಯಕ್ಷ ವೀರಭದ್ರ ಸ್ವಾಮಿ, ಕಿರಗಸೂರ್ ಶಂಕರ್ ಉಪಸ್ಥಿತರಿದ್ದರು.
Key words: Cauvery Dispute, Postponing, bandh, Kuruburu Shanthakumar
The post ಆ.13ರ ಬಂದ್ ಮುಂದೂಡುವುದು ಸೂಕ್ತ – ಕುರುಬೂರು ಶಾಂತಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




