ಮೈಸೂರು,ಫೆಬ್ರವರಿ,3,2026 (www.justkannada.in): ಸರ್ಕಾರ ನಿಗದಿ ಮಾಡಿರುವ ಕಬ್ಬು ಹೆಚ್ಚುವರಿ ದರ ಹತ್ತು ದಿನದಲ್ಲಿ ರೈತರ ಖಾತೆಗೆ ಜಮಾ ಆಗಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಭರವಸೆ ನೀಡಿದರು.
ಕಬ್ಬು ಬೆಳೆಗಾರ ರೈತ ಮುಖಂಡರು ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಅಧಿಕಾರಿಗಳ ಸಭೆ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಬಣ್ಣಾರಿ ಕಾರ್ಖಾನೆಯವರು ಕಬ್ಬಿನಿಂದ ಬರುವ ಉಪ ಉತ್ಪನ್ನಗಳನ್ನು ಇವರ ಮಾಲೀಕತ್ವದಲ್ಲಿರುವ ಬೇರೆ ಬೇರೆ ಹೆಸರಿನಲ್ಲಿ ಸ್ಥಾಪಿಸಿರುವ ಕಂಪನಿಗಳಿಗೆ ಪೂರೈಕೆ ಮಾಡುತ್ತಿರುವುದರಿಂದ ಕಬ್ಬಿನಿಂದ ಬರುವ ಉಪ ಉತ್ಪನ್ನಗಳ ಲಾಭ ಇಲ್ಲ ಎಂದು ಲೆಕ್ಕ ತೋರಿಸುತ್ತಾ ರೈತರಿಗೆ ಮೋಸ ಮಾಡುತ್ತಿದ್ದಾರೆ. ಸಕ್ಕರೆ ಇಳುವರಿಯಲ್ಲಿಯೂ ಕಡಿಮೆ ತೋರಿಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಲಾಭವನ್ನು ಹಂಚಿಕೆ ಮಾಡದೆ ಇರುವ ಬಗ್ಗೆ ಸರ್ಕಾರಕ್ಕೆ ವರದಿ ಮಾಡಿ ರೈತರಿಗೆ ನ್ಯಾಯ ಕೊಡಿಸಬೇಕು. ಕೂಡಲೇ ಸರ್ಕಾರ ನಿಗದಿ ಮಾಡಿರುವ ಹಣ ರೈತರಿಗೆ ಪಾವತಿಸಬೇಕು ಎಂದು ಒತ್ತಾಯಿಸಿದರು
ಸಭೆಯಲ್ಲಿ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಕಬ್ಬಿಗೆ ಸರ್ಕಾರ ನಿಗದಿ ಮಾಡಿರುವ ಹೆಚ್ಚುವರಿ ನೂರು ರೂಪಾಯಿ ಬಾಪ್ತು ಸರ್ಕಾರ 10 ದಿನದಲ್ಲಿ ಹಣ ಬಿಡುಗಡೆ ಮಾಡಲಿದೆ. ಅದರ ಜೊತೆಯಲ್ಲಿ ಬಣ್ಣಾರಿ ಕಾರ್ಖಾನೆ ತನ್ನಿಗೆ ಐವತ್ತು ರುಪಾಯಿ ಸೇರಿಸಿ ರೈತರ ಖಾತೆಗೆ ಜಮಾ ಮಾಡಲಾಗುವುದು. ಸರ್ಕಾರ ಈಗಾಗಲೇ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆ ಮಾಡಿದೆ ಎಂದು ಸಭೆಯಲ್ಲಿ ತಿಳಿಸಿದರು.
ಮುಂದಿನ ವರ್ಷದಿಂದ ಪ್ರತಿ ತಿಂಗಳು ರೈತರ ಕಬ್ಬು ಕಟಾವು ನೋಂದಣಿ ಆದ್ಯತೆಯ ಪಟ್ಟಿ ಪ್ರತಿ ತಿಂಗಳು ಬಿಡುಗಡೆ ಮಾಡಿ ಅದರಂತೆ ಕಬ್ಬು ಕಟಾವು ಮಾಡಿಸಬೇಕು. ನಿರ್ಲಕ್ಷ್ಯ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಲಕ್ಷ್ಮೀಕಾಂತ ರೆಡ್ಡಿ ಕಠಿಣವಾಗಿ ಎಚ್ಚರಿಸಿದರು
ಬಣ್ಣಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ ಏಳುವರೆ ಲಕ್ಷ ಟನ್ ಕಬ್ಬು ಅರೆದಿದೆ. ನಮಗೆ ವರ್ಷಕ್ಕೆ 15 ಲಕ್ಷ ಟನ್ ಕಬ್ಬು ಬೇಕು ಎಂದು ಕಾರ್ಖಾನೆ ಉಪಾಧ್ಯಕ್ಷ ವೇಲುಸ್ವಾಮಿ ಸಭೆಗೆ ತಿಳಿಸಿದರು.
ಕಬಿನಿ ಜಲಾಶಯದಲ್ಲಿ 75 ಅಡಿ ನೀರಿದೆ ಕೆರೆಕಟ್ಟೆ ತುಂಬಿಸಲು ದನ ಕರು ಕುಡಿಯಲು, ನೀರು ನಾಲೆಗಳಲ್ಲಿ ಹರಿಸುವಂತೆ ಸಭೆಯಲ್ಲಿ ರೈತರು ಒತ್ತಾಯ ಮಾಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಮಾತನಾಡಿ ಒಂದು ವಾರದಲ್ಲಿ ನೀರಾವರಿ ಸಲಹಾ ಸಮಿತಿ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಪೊಲೀಸ್ ಉಪ ಆಧೀಕ್ಷಕ ಮಲ್ಲಿಕ್, ಜಂಟಿ ಕೃಷಿ ನಿರ್ದೇಶಕ ರವಿ, ಜಿಲ್ಲಾ ಆಹಾರ ಇಲಾಖೆ ಜಂಟಿ ನಿರ್ದೇಶಕರು ರೈತ ಮುಖಂಡ ಹತ್ತಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಸೋಮಶೇಖರ್, ಕಿರುಗಸೂರು ಶಂಕರ್, ಬರ್ಡನಾಪುರ ನಾಗರಾಜ್. ಲಕ್ಷ್ಮಿಪುರ ವೆಂಕಟೇಶ್. ಕೆ ಆರ್ ನಗರ ತಿಮ್ಮಪ್ಪ. ಕುರುಬೂರು ಸಿದ್ದೇಶ್. ಮುಂತಾದವರು ಉಪಸ್ಥಿತರಿದ್ದರು.
Key words: Sugarcane, farmer, Meeting, Mysore, Kurubur Shanthakumar
The post ಕಬ್ಬು ಹೆಚ್ಚುವರಿ ದರ ಹತ್ತು ದಿನಗಳಲ್ಲಿ ರೈತರ ಖಾತೆಗೆ ಜಮಾ: ಮೈಸೂರು ಡಿಸಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




