5
September, 2026

A News 365Times Venture

5
Saturday
September, 2026

A News 365Times Venture

ಬರ ಘೋಷಣೆ; 15 ದಿನಗಳಲ್ಲಿ ಮತ್ತಷ್ಟು ತಾಲ್ಲೂಕುಗಳ ಪಟ್ಟಿ: ಸಿಎಂ ಡಿ.ಕೆ ಶಿವಕುಮಾರ್

Date:

ಬಾಗಲಕೋಟೆ, ಸೆಪ್ಟಂಬರ್, 04,2026 (www.justkannada.in): “ರಾಜ್ಯದಲ್ಲಿ ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಮತ್ತಷ್ಟು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲು ತೀರ್ಮಾನ ಮಾಡಲಾಗುವುದು” ಎಂದು ಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದರು.

ಬಾಗಲಕೋಟೆಯ ಕೂಡಲಸಂಗಮದಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, “ಜಿಲ್ಲಾ ಸಚಿವರು ಭೇಟಿ ನೀಡಿ ಸಲ್ಲಿಸಿರುವ ವರದಿಗಳು ಮತ್ತು ಅಧಿಕಾರಿಗಳ ವರದಿಗಳನ್ನು ಆಧರಿಸಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಹಂತ-ಹಂತವಾಗಿ ಪಟ್ಟಿ ಬಿಡುಗಡೆ ಮಾಡಲಾಗುವುದು. ಮಿಕ್ಕ ತಾಲ್ಲೂಕುಗಳ ಬಗ್ಗೆ ವೈಜ್ಞಾನಿಕ  ಪರಿಶೀಲನೆ ನಡೆಯುತ್ತಿದೆ‌. ಒಂದಷ್ಟು ಅಚ್ಚುಕಟ್ಟು ಪ್ರದೇಶಗಳನ್ನು ಹೊರತುಪಡಿಸಿದರೆ ಬಹುತೇಕ ಕಡೆ ಉತ್ತಮ ಬೆಳೆ ಕಾಣುತ್ತಿಲ್ಲ. ಬಾಗಲಕೋಟೆಯಲ್ಲೂ ಪರಿಸ್ಥಿತಿ ಗಂಭೀರವಾಗಿದೆ.  ರೈತರೊಂದಿಗೆ ಚರ್ಚಿಸಿ ವಾಸ್ತವ ಸ್ಥಿತಿಯನ್ನು ಅರಿಯಲಾಯಿತು. ರಾಜ್ಯದಲ್ಲಿ ಶೇ.42-43ರಷ್ಟು ಮಳೆ ಕೊರತೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಗದಗ, ಧಾರವಾಡ, ಹಾವೇರಿ ಬಳಿಕ ಬಾಗಲಕೋಟೆಯಲ್ಲೂ ಬೆಳೆಗಳು ತೀವ್ರವಾಗಿ ಹದಗೆಟ್ಟಿವೆ” ಎಂದರು.

“ಇತ್ತೀಚೆಗೆ ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಹಲವು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದರೂ ಇನ್ನೂ ಎಲ್ಲ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಿಲ್ಲ. ಈ ಕುರಿತು ವರದಿಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ಎರಡನೇ ಹಾಗೂ ಮೂರನೇ ಹಂತದಲ್ಲಿ ಇತರೇ ತಾಲ್ಲೂಕುಗಳ ಬಗ್ಗೆ ತೀರ್ಮಾನ ಮಾಡಲಾಗುವುದು” ಎಂದರು.

“‌ಕೇಂದ್ರದ ಮಾರ್ಗಸೂಚಿಯಲ್ಲಿ ಇಷ್ಟು ದಿನಗಳ ಕಾಲ ಮಳೆಯಾಗಿರಬಾರದು ಎಂದು ಸ್ಪಷ್ಟವಾಗಿ ಹೇಳಿದೆ.  ಗದಗ ಜಿಲ್ಲೆಯಲ್ಲಿ ಆರು ತಾಲ್ಲೂಕಿನಲ್ಲಿ ಒಂದು ತಾಲ್ಲೂಕು ಬರ ಎಂದು ಘೋಷಣೆಯಾಗಿದೆ. ಗದಗ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ಭಾಗಗಳಲ್ಲಿ ಕೃಷಿ ಪರಿಸ್ಥಿತಿ ತೀವ್ರ ಸಂಕಷ್ಟದಲ್ಲಿದೆ. ವೈಮಾನಿಕ ಸಮೀಕ್ಷೆ ಮೂಲಕವೂ ಪರಿಸ್ಥಿತಿಯನ್ನು ಗಮನಿಸಲಾಗಿದೆ” ಎಂದರು.

ರೈತರ ಹಿತ ಸರ್ಕಾರಕ್ಕೆ ಮುಖ್ಯ

“ಕೃಷ್ಣಾ ನದಿಗೆ ಸ್ವಲ್ಪ ನೀರು ಬಂದಿದೆ, ಕಾವೇರಿ ಸೇರಿದಂತೆ ಬೇರೆಡೆಗಳಲ್ಲಿ ಇಷ್ಟೂ ನೀರು ಬಂದಿಲ್ಲ.  ತಮಿಳುನಾಡಿನವರು ತಮ್ಮ ಬೆಳೆಗಳಿಗಾಗಿ ನೀರು ಕೇಳುತ್ತಿದ್ದಾರೆ. ನಾನು, ಸಚಿವರಾದ ಯತೀಂದ್ರ ಸಿದ್ದರಾಮಯ್ಯ ಹಾಗೂ ಚೆಲುವರಾಯಸ್ವಾಮಿಯವರು ಚರ್ಚಿಸಿ ಚರ್ಚಿಸಿ ಸೂಕ್ತ ಕ್ರಮ ಕೈಗೊಂಡಿದ್ದೇವೆ. ಕೆಆರ್ ಎಸ್ ಬದಲಿಗೆ ಕಬಿನಿಯಿಂದ ನೀರನ್ನು ಹರಿಸಲಾಗುತ್ತಿದೆ. ರೈತರ ಹಿತ ಸರ್ಕಾರಕ್ಕೆ ಮುಖ್ಯ” ಎಂದರು.

ಕಸ್ತೂರಿರಂಗನ್ ವರದಿ: ಎಲ್ಲ ಪಕ್ಷಗಳ ಅಭಿಪ್ರಾಯ ಪಡೆಯುತ್ತೇವೆ

“ಕಸ್ತೂರಿರಂಗನ್ ವರದಿ ವಿಚಾರದಲ್ಲಿ ರಾಜ್ಯದ ಹಿಂದಿನ ನಿರ್ಧಾರಕ್ಕೆ ವಿರುದ್ಧವಾಗಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ್ದು, ರಾಜ್ಯದ ಅಭಿಪ್ರಾಯ ತಿಳಿಸಲು 60 ದಿನಗಳ ಕಾಲಾವಕಾಶ ನೀಡಿದೆ. ಹೀಗಾಗಿ ಎಲ್ಲ ಪಕ್ಷಗಳ ಅಭಿಪ್ರಾಯ ಪಡೆದು ರಾಜ್ಯದ ನಿಲುವು ರೂಪಿಸಬೇಕಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿಯವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸಬೇಕಿದೆ. ಆಗ ಅಧಿವೇಶನದಲ್ಲಿ ಮಾತನಾಡದವರು ಈಗ ಏಳು ದಿನಗಳ ವಿಶೇಷ ಅಧಿವೇಶನ ಕರೆಯಿರಿ ಎಂದು ಹೇಳುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.

ಶನಿವಾರದಂದು ‘ಪ್ರಜಾಸೇವಾ;  ಮನೆ ಬಾಗಿಲಿಗೆ ಸರ್ಕಾರ

“ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೂಡ್ಲಗಿಯಲ್ಲಿ ‘ಪ್ರಜಾಸೇವಾ ಇಲಾಖೆ’ಗೆ ಚಾಲನೆ ನೀಡಲಾಗುತ್ತಿದೆ. ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ” ಎಂದು ತಿಳಿಸಿದರು.

“ಪ್ರತಿ ತಿಂಗಳು ಮೊದಲ ಹಾಗೂ ಮೂರನೇ ಶನಿವಾರ ಸಚಿವರು ಕಡ್ಡಾಯವಾಗಿ ಒಂದೊಂದು ತಾಲೂಕಿಗೆ ತೆರಳಿ ಜನರ ಸಮಸ್ಯೆ ಆಲಿಸಬೇಕು. ಮೊದಲ ಸುತ್ತಿನ ಬಳಿಕ ಹೋಬಳಿ ಮಟ್ಟಕ್ಕೂ ತೆರಳಬೇಕು. ಶಾಸಕರು ಪಂಚಾಯಿತಿ ಮಟ್ಟದಲ್ಲಿ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಲು ಸೂಚಿಸಲಾಗಿದೆ. ಎಲ್ಲ ಸಮಸ್ಯೆಗಳನ್ನೂ ತಕ್ಷಣವೇ ಪರಿಹರಿಸಲಾಗುತ್ತದೆ ಎಂದು ಹೇಳುವುದಿಲ್ಲ. ಆದರೆ ಜನರ ಬಳಿಗೆ ತೆರಳಿ ಅವರ ಸಮಸ್ಯೆ ಮತ್ತು ಭಾವನೆಗಳನ್ನು ನೇರವಾಗಿ ತಿಳಿದುಕೊಂಡರೆ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಅವಕಾಶ ದೊರೆಯಲಿದೆ” ಎಂದು ಹೇಳಿದರು.

“ಶಿಕ್ಷಕರ ದಿನಾಚರಣೆಯ ಹಿನ್ನೆಲೆ ಉನ್ನತ ಶಿಕ್ಷಣ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವರು ಸೇರಿದಂತೆ ಮೂವರು ಸಚಿವರಿಗೆ ವಿಶೇಷ ಜವಾಬ್ದಾರಿ ಇರುವುದರಿಂದ, ಅವರನ್ನು ಹೊರತುಪಡಿಸಿ ಉಳಿದ ಸಚಿವರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಜಾಸೇವೆ ಅಭಿಯಾನದಲ್ಲಿ ತಾವು ಸ್ವತಃ ಬೆಳಿಗ್ಗೆಯಿಂದ ಸಾರ್ವಜನಿಕರು ನೀಡುವ ಅರ್ಜಿಗಳನ್ನು ಸ್ವೀಕರಿಸಿ, ಅಧಿಕಾರಿಗಳ ಜೊತೆಗೂಡಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಈ ಪ್ರಕ್ರಿಯೆ ಎಲ್ಲಾ ತಾಲೂಕುಗಳಲ್ಲೂ ಮುಂದುವರಿಯಲಿದೆ” ಎಂದರು.

ಬಿಜೆಪಿ ಇನ್ನೂ ನಾಲ್ಕು ಯಾತ್ರೆ ಮಾಡಲಿ, ಪಶ್ಚಾತ್ತಾಪ ಯಾತ್ರೆಯೂ ಮಾಡಲಿ

ಬಿಜೆಪಿ ಪಾದಯಾತ್ರೆ ಕುರಿತು ಕೇಳಿದಾಗ, “ಬಿಜೆಪಿಯವರು ಇನ್ನೂ ನಾಲ್ಕು ಯಾತ್ರೆ ಮಾಡಲಿ. ಪಶ್ಚಾತ್ತಾಪ ಯಾತ್ರೆಯನ್ನೂ ಮಾಡಿಕೊಳ್ಳಲಿ. ಜನರು ಅವರಿಗೆ ಈಗಾಗಲೇ ತೀರ್ಪು ನೀಡಿದ್ದಾರೆ’ ಎಂದು ಹೇಳಿದರು.

ಬಿ. ನಾಗೇಂದ್ರ ಅವರ ರಾಜೀನಾಮೆ ಕುರಿತು ಮಾತನಾಡುತ್ತಾ, “ಸರ್ಕಾರಕ್ಕೆ ಮುಜುಗರವಾಗಬಾರದು ಹಾಗೂ ಎಂಬ ಕಾರಣಕ್ಕೆ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ಆದರೂ ಅವರು ನಮ್ಮ ನಾಯಕರೇ. ಅದರಲ್ಲಿ ಯಾವುದೇ ಅನುಮಾನವಿಲ್ಲ” ಎಂದರು.

ಶಕ್ತಿಶಾಲಿಗಳಿಗೆ ಶತ್ರುಗಳು ಹೆಚ್ಚು

“ಹೆಚ್ಚು ಶಕ್ತಿಶಾಲಿಯಾಗಿದ್ದಷ್ಟು ಹೆಚ್ಚು ಶತ್ರು, ಕಡಿಮೆ ಶಕ್ತಿ ಇದ್ದರೆ ಕಡಿಮೆ ಶತ್ರುಗಳು, ಶಕ್ತಿಯೇ ಇಲ್ಲದಿದ್ದರೇ ಶತ್ರುಗಳೆ ಇಲ್ಲ. ದೃಢವಾಗಿ ಕೆಲಸ ಮಾಡುವವರ ಮೇಲೆ ಕಣ್ಣಿಡುವುದು ಸಹಜ” ಎಂದರು.

ಎಸ್ ಟರ್ನ್ ಮಾಡೋಕೆ ನೀವು ನನಗೆ ಶಕ್ತಿ ಕೊಟ್ಟಿದ್ದೀರಿ

“ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕವನ್ನು ವಾಪಸ್ ಪಡೆದಿರುವುದಕ್ಕೆ ವಿರೋಧಪಕ್ಷಗಳು ಸಿಎಂ ‘ಯು-ಟರ್ನ್’ ಎನ್ನುತ್ತಿವೆ. ಯೂ, ವೈ, ಎಕ್ಸ್ ಎಲ್ಲಾ ಅವರ ಹತ್ತಿರಾನೇ ಇದೆ. ಎಸ್ ಟರ್ನ್ ಮಾಡೋಕೆ ಜನರು ನನಗೆ ಶಕ್ತಿ ಕೊಟ್ಟಿದ್ದಾರೆ. ಯಾವ ಟರ್ನ್ ಮಾಡಬೇಕು ಅನ್ನೋದನ್ನು ಆಮೇಲೆ ನೋಡೋಣ” ಎಂದು ಕುಟುಕಿಯಾಡಿದರು.

“ಅಧಿವೇಶನದಲ್ಲಿ ಚರ್ಚೆ ನಡೆಸಿದ್ದರೆ ಈ ಬಗ್ಗೆ ಸೂಕ್ತ ಉತ್ತರ ಕೊಡುತ್ತಿದ್ದೆ. ವಿಧೇಯಕ ಜಾರಿ ಮಾಡುತ್ತಿರುವುದು ಸಾರ್ವಜನಿಕರ ಹಿತಕ್ಕಾಗಿ. ಅಗತ್ಯ ಬಿದ್ದರೆ ಸಮಿತಿ ಮಾಡಿ ತೀರ್ಮಾನ ಮಾಡಿ ಎಂದು ಹೇಳುತ್ತಿದ್ದೆ. ವಿಧೇಯಕಕ್ಕೆ ಅಧಿವೇಶದಲ್ಲಿ ಅನುಮೋದನೆ ಕೂಡ ದೊರೆತಿತ್ತು. ಹಿಂದಕ್ಕೆ ಪಡೆಯುವ ವಿಚಾರದಲ್ಲಿ ಯಾವುದೇ ಪ್ರತಿಷ್ಠೆಯ ಪ್ರಶ್ನೆ ಇಲ್ಲ. ನನಗೆ ಸಾರ್ವಜನಿಕ ಹಿತ, ಅಭಿಪ್ರಾಯ ಮುಖ್ಯ” ಎಂದರು.

Key words: Drought declaration, more taluks, 15 days,  CM, D.K. Shivakumar

The post ಬರ ಘೋಷಣೆ; 15 ದಿನಗಳಲ್ಲಿ ಮತ್ತಷ್ಟು ತಾಲ್ಲೂಕುಗಳ ಪಟ್ಟಿ: ಸಿಎಂ ಡಿ.ಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಾಲಮನ್ನಾಕ್ಕೆ ನೆರವು ಕೋರಿ ದೆಹಲಿಗೆ ಸರ್ವಪಕ್ಷ ನಿಯೋಗ: ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ಸೆಪ್ಟಂಬರ್,4,2026 (www.justkannada.in):  “ಸಾಲ ಮನ್ನಾಕ್ಕೆ ನೆರವು ಕೋರಿ ದೆಹಲಿಗೆ ಸರ್ವಪಕ್ಷ...

ಸಿಎಂ ಡಿಕೆಶಿಗಿಂತ ಸೂಪರ್ ಸಿಎಂ ಪ್ರಿಯಾಂಕ್ ಖರ್ಗೆ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯ

ಬೆಂಗಳೂರು,ಸೆಪ್ಟಂಬರ್,4,2026 (www.justkannada.in):  ಸಿಎಂ ಡಿಕೆ ಶಿವಕುಮಾರ್ ಗಿಂತ  ಸೂಪರ್ ಸಿಎಂ  ಇದ್ದಾರೆ...

ಕರ್ನಾಟಕ–ಫಿನ್‌ಲ್ಯಾಂಡ್‌ ಕೌಶಲ್ಯಾಭಿವೃದ್ಧಿಗೆ ಹೊಸ ಬಲ: ವಿದ್ಯಾರ್ಥಿ, ಶಿಕ್ಷಕರಿಗೆ ಜಾಗತಿಕ ಅವಕಾಶ

ಬೆಂಗಳೂರು, ಸೆಪ್ಟಂಬರ್,4,2026 (www.justkannada.in):  ಕರ್ನಾಟಕದ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ವ್ಯವಸ್ಥೆಯನ್ನು...

ಮೈಸೂರು ದಸರಾ 2026: ಯುವದಸರಾ ಉದ್ಘಾಟಿಸಲಿದ್ದಾರೆ ‘ಇಂಡಿಯನ್ ಮೈಕೆಲ್ ಜಾಕ್ಸನ್’ ಪ್ರಭುದೇವ

ಮೈಸೂರು,ಸೆಪ್ಟಂಬರ್,4,2026 (www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ಕ್ಕೆ ಭರ್ಜರಿ ಸಿದ್ಧತೆಗಳು...