ಮೈಸೂರು,ಏಪ್ರಿಲ್,15,2026 (www.justkannada.in): ಮೈಸೂರಿನ ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯ(AIISH) ಮಾತು-ಭಾಷಾ ವಿಜ್ಞಾನ ವಿಭಾಗವು ಪಾರ್ಕಿನ್ಸನ್ ಸಮಸ್ಯೆಯಿಂದಾಗಿ ಮಾತು ಹಾಗೂ ಸಂವಹನದಲ್ಲಿ ಉಂಟಾಗುವ ಬದಲಾವಣೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸಂಸ್ಥೆಯಲ್ಲಿ ‘ಅಭಿಶಿಕ್ಷಣ ಕಾರ್ಯಕ್ರಮ’ (Orientation talk) ವನ್ನು ಆಯೋಜಿಸಿದೆ.
ಈ ಕಾರ್ಯಕ್ರಮವು ಪಾರ್ಕಿನ್ಸನ್ ಸಮಸ್ಯೆಯುಳ್ಳವರು, ಅವರ ಪಾಲಕರು, ಕುಟುಂಬ ಸದಸ್ಯರು, ಆರೈಕೆದಾರರು ಹಾಗೂ ಸ್ನೇಹಿತರಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಕಾರ್ಯಕ್ರಮದಲ್ಲಿ ಪಾರ್ಕಿನ್ಸನ್ ತೊಂದರೆಯುಳ್ಳ ವ್ಯಕ್ತಿಗಳಿಗೆ ಕೇವಲ ಚಲನಾಶೀಲತೆಯ ಸಮಸ್ಯೆಗಳಿಗೆ ಮಾತ್ರವಲ್ಲದೆ, ಧ್ವನಿ, ಮಾತು ಮತ್ತು ಸಂವಹನ ಸಂಬಂಧಿತ ಸಮಸ್ಯೆಗಳಿಗೂ ಸೂಕ್ತ ಚಿಕಿತ್ಸೆಯ ಅಗತ್ಯವಿದೆ ಎಂಬುದರ ಕುರಿತು ತಿಳುವಳಿಕೆ ಒದಗಿಸಲಾಗುತ್ತದೆ.
ಹೀಗಾಗಿ ಪಾರ್ಕಿನ್ಸನ್ ರೋಗಿಗಳ ಚಿಕಿತ್ಸೆ ಹಾಗೂ ತರಬೇತಿಯಲ್ಲಿ ತೊಡಗಿಸಿಕೊಂಡಿರುವ ವೈದ್ಯರು, ನರ್ಸ್ ಗಳು, ಭೌತಿಕ ಚಿಕಿತ್ಸಕರು, ಔದ್ಯೋಗಿಕ ತಜ್ಞರು ಹಾಗೂ ಇತರ ಆರೋಗ್ಯ ವೃತ್ತಿಪರರು ಈ ಮಾಹಿತಿಯನ್ನು ಅಗತ್ಯವಿರುವವರೊಂದಿಗೆ ಹಂಚಿಕೊಳ್ಳಬಹುದಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಇಚ್ಛೆಯುಳ್ಳವರು ಸಂಸ್ಥೆಯ ಕಿರಿಯ ಸಂಶೋಧನಾ ವಿದ್ಯಾರ್ಥಿನಿಯಾದ (Junior Research Fellow) ಸಶಿರೇಖಾ ಎನ್. ಅವರನ್ನು (ಮೊ.ಸಂಖ್ಯೆ : 91 99169 59785) ಸಂಪರ್ಕಿಸಬಹುದು.
ಪಾರ್ಕಿನ್ಸನ್ ಕಾಯಿಲೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಏಪ್ರಿಲ್ ತಿಂಗಳನ್ನು “ಪಾರ್ಕಿನ್ಸನ್ ಜಾಗೃತಿ ತಿಂಗಳು” ಎಂದು ಆಚರಿಸಲಾಗುತ್ತದೆ. ಪಾರ್ಕಿನ್ಸನ್ ನ ಲಕ್ಷಣಗಳನ್ನು ಬೇಗನೆ ಗುರುತಿಸುವುದು, ಈ ಸಮಸ್ಯೆಯುಳ್ಳವರನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅವರಿಗೆ ಅಗತ್ಯ ಸಹಾಯ ಒದಗಿಸುವುದು ಇದರ ಮುಖ್ಯ ಉದ್ದೇಶ.
ಪಾರ್ಕಿನ್ಸನ್, ನರಗಳಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಸಾಮಾನ್ಯವಾಗಿ ಹಿರಿಯರಲ್ಲಿ ಕಾಣಿಸಿಕೊಳ್ಳುತ್ತದೆ. ದೈಹಿಕ ಚಲನೆಗಳು ನಿಧಾನವಾಗುವುದು, ಕೈ ಕಾಲುಗಳಲ್ಲಿ ನಡುಕ, ದೇಹದ ಅಂಗಾಂಗಗಳು ಬಿಗಿಯಾಗುವುದು ಮತ್ತು ಶಾರೀರಿಕ ಅಸಮತೋಲನದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ, ಹಲವರಲ್ಲಿ ಮಾತು ಮತ್ತು ಸಂವಹನದಲ್ಲಿ ತೊಂದರೆಗಳು ಸಹ ಉಂಟಾಗಬಹುದು. ಹಾಗೂ ಸಾಮಾನ್ಯವಾಗಿ ಸಮಸ್ಯೆಯ ತೀವ್ರತೆ ಕಾಲಕ್ರಮೇಣ ಹೆಚ್ಚಾಗುತ್ತದೆ. ಆದರೆ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಆರಂಭಿಸಿದರೆ ಹಾಗೂ ಕುಟುಂಬದಿಂದ ಸೂಕ್ತ ಬೆಂಬಲ ದೊರೆತು, ತಜ್ಞರು ಸೂಚಿಸಿದ್ದನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ, ಪಾರ್ಕಿನ್ಸನ್ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಯು ತನ್ನ ಸಂವಹನ ಕೌಶಲ್ಯವನ್ನು ಸುಧಾರಿಸಿಕೊಂಡು ಎಲ್ಲರಂತೆ ಉತ್ತಮ ಜೀವನವನ್ನು ನಡೆಸಬಹುದು.
Key words: Parkinson’s, Awareness, program, AIISH
The post ಮೈಸೂರಿನ ಐಶ್(AIISH) ನಲ್ಲಿ ‘ಪಾರ್ಕಿನ್ಸನ್’ ಕಾಯಿಲೆ ಕುರಿತು ಜಾಗೃತಿ ಕಾರ್ಯಕ್ರಮ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




