8
August, 2026

A News 365Times Venture

8
Saturday
August, 2026

A News 365Times Venture

ಎಲ್ಲ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಕಾಂಗ್ರೆಸ್ ಬದ್ಧ: ಸಿಎಂ ಡಿ.ಕೆ ಶಿವಕುಮಾರ್

Date:

ಬೆಂಗಳೂರು, ಆಗಸ್ಟ್,7,2026 (www.justkannada.in): ನಮ್ಮ ಸರ್ಕಾರ ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಿದ್ದು, ಅದನ್ನು ಜಾರಿಗೆ ತಂದು ಸಾಮಾಜಿಕ ನ್ಯಾಯ ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದು ಸಿಎಂ ಡಿ.ಕೆ ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರೀಯ ಒಬಿಸಿ ಮಹಾಸಂಘದ 11ನೇ ರಾಷ್ಟ್ರೀಯ ಮಹಾ ಸಮಾವೇಶವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

“21 ರಾಜ್ಯಗಳಿಂದ ಬಂದಿರುವ ನಿಮ್ಮೆಲರನ್ನು ಭೇಟಿ ಮಾಡಿರುವುದು ಸಂತೋಷ ತಂದಿದೆ. ಕಾಂಗ್ರೆಸ್ ಪಕ್ಷ ಹಾಗೂ ಕರ್ನಾಟಕ ಸರ್ಕಾರದ ಪರವಾಗಿ ನಿಮ್ಮೆಲ್ಲರಿಗೂ ಸ್ವಾಗತ ಕೋರುತ್ತೇನೆ. ನಾವು ವೈವಿಧ್ಯತೆಯ ದೇಶದಲ್ಲಿದ್ದೇವೆ. ಮಾನವಿಯತೆ ಮೇಲೆ ನಂಬಿಕೆ ಇಟ್ಟಿದ್ದೇವೆ. ನಮ್ಮ ರಾಜ್ಯ ಅತ್ಯಂತ ಪ್ರಾಚೀನ ಪರಂಪರೆ ಹೊಂದಿದೆ. ಬಸವಣ್ಣನವರು 12ನೇ ಶತಮಾನದಲ್ಲಿ ವಿಶ್ವದ ಮೊದಲ ಸಂಸತ್ತನ್ನು ಆರಂಭಿಸಿದರು. ಎಲ್ಲಾ ವರ್ಗದ ಜನರು ಆ ಸಂಸತ್ತಿನ ಭಾಗವಾಗಿದ್ದರು. ನಿಮಗೆ ಸಾಧ್ಯವಾದರೆ ಬೀದರ್ ಜಿಲ್ಲೆಯ ಬಸವಕಲ್ಯಾಣಕ್ಕೆ ಹೋಗಿ ಬಸವಣ್ಣನವರ ಅನುಭವ ಮಂಟಪ ವೀಕ್ಷಣೆ ಮಾಡಿ. ಇದು ಕರ್ನಾಟಕ ಸರ್ಕಾರದ ಇತಿಹಾಸ” ಎಂದು ತಿಳಿಸಿದರು.

“ನಾನು ಹಾಗೂ ಹರಿಪ್ರಸಾದ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಬೆಳೆದವರು. ಕಾಂಗ್ರೆಸ್ ಸರ್ಕಾರ ಇಲ್ಲಿದೆ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನರು ಅಧಿಕಾರಕ್ಕೆ ಬಂದಂತೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ಸಂವಿಧಾನ ನೀಡಿದ್ದು, ನೆಹರೂ ಅವರ ಕಾಲದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲಾ ಎಲ್ಲಾ ವರ್ಗದವರ ರಕ್ಷಣೆ ಮಾಡಲಾಗಿದೆ. ಇಂದಿರಾ ಗಾಂಧಿ ಹಾಗೂ ದೆವರಾಜ ಅರಸು ಅವರ ಕಾಲದಲ್ಲಿ ಉಳುವವನೇ ಭೂಮಿಯ ಒಡೆಯ ಎಂದು ಘೋಷಣೆ ಮಾಡಲಾಯಿತು” ಎಂದರು.

“ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲೇ ಓಬಿಸಿ ಮೀಸಲಾತಿ ನೀಡಲಾಗಿತ್ತು. ಇದು ಕರ್ನಾಟಕ ರಾಜ್ಯದ ಇತಿಹಾಸ. ದೇಶದಲ್ಲಿ 52% ಹಿಂದುಳಿದ ವರ್ಗದವರಿದ್ದೀರಿ. ನೀವುಗಳು ನಿಮ್ಮ ಸಾಮರ್ಥ್ಯ, ಕಲೆ ಹಾಗೂ ಜ್ಞಾನದಿಂದ  ಈ ದೇಶವನ್ನು ಕಟ್ಟಿದ್ದೀರಿ. ನೀವು ಈ ದೇಶದ ನಿರ್ಮಾತೃಗಳು. ನಿಮ್ಮ ಬೇಡಿಕೆಗಳ ಬಗ್ಗೆ ನಮಗೆ ಅರಿವಿದೆ” ಎಂದು ಹೇಳಿದರು.

ಸರ್ವರಿಗೂ ಸಮಬಾಳು ಸಮಪಾಲು ತತ್ವದ ಮೇಲೆ ಸಾಗುತ್ತಿದ್ದೇವೆ

“ನಾವು ಸರ್ವರಿಗೂ ಸಮಬಾಳು ಸಮಪಾಲು ತತ್ವದ ಮೇಲೆ ನಡೆಯುತ್ತಿದ್ದೇವೆ. ಬ್ರಿಟೀಷರ ಕಾಲದಲ್ಲೇ ಸಮಾನತೆಯ ಚರ್ಚೆ ಇತ್ತು. ಹೀಗಾಗಿ 1931ರ ಸಮಯದಲ್ಲಿ ಜಾತಿ ಗಣತಿ ಮಾಡಲಾಗಿತ್ತು. ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಈ ಜಾತಿ ಗಣತಿಯನ್ನು ನಡೆಸಲು ಬದ್ಧರಾಗಿದ್ದಾರೆ. ಆ ಮೂಲಕ ಸಮಾಜದ ಎಲ್ಲಾ ವರ್ಗದವರಿಗೆ ಸಮಾನ ಅವಕಾಶ ನೀಡಬೇಕು. ಇಂದು ಪ್ರತಿ ಸಮುದಾಯಕ್ಕೂ ಸಂವಿಧಾನಿಕ ಹಕ್ಕು ನೀಡಲಾಗಿದೆ. ಕರ್ನಾಟಕದಲ್ಲಿ ಪ್ರತ್ಯೇಕ ಹಿಂದುಳಿದ ವರ್ಗಗಳ ಇಲಾಖೆ ಇದೆ. ಇದಕ್ಕಾಗಿ ಅನುದಾನ ನೀಡಲಾಗುವುದು. ಈ ವರ್ಗದ ಕೂಗನ್ನು ನಾವು ಆಲಿಸುತ್ತಿದ್ದೇವೆ. ನಮ್ಮ ಸಚಿವ ಸಂಪುಟದಲ್ಲಿ ಮೂರನೇ ಎರಡು ಭಾಗದಷ್ಟು ಸಚಿವರು ಹಿಂದುಳಿದವರು, ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರಾಗಿದ್ದಾರೆ. ಇದು ನಮ್ಮ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ನನಗೆ ಹಾಗೂ ಹರಿಪ್ರಸಾದ್ ಅವರಿಗೆ ನೀಡಿರುವ ಮಾರ್ಗದರ್ಶನ” ಎಂದು ತಿಳಿಸಿದರು.

ಬೇರೆ ರಾಜ್ಯಗಳು ನಮ್ಮ ಗ್ಯಾರಂಟಿ ಯೋಜನೆ ಅನುಸರಿಸಿವೆ

“ನಾವು ಅಧಿಕಾರಕ್ಕೆ ಬರುವ ಮುನ್ನ ನಾನು ಹಾಗೂ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಬೆಲೆ ಏರಿಕೆಯಿಂದ ರಕ್ಷಣೆ ನೀಡುವ ಭರವಸೆ ನೀಡಿದೆವು. ಅವರಿಗೆ ನೆರವಾಗಲು ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆವು. ನಮ್ಮ ಯೋಜನೆ ನೋಡಿ ಎಲ್ಲರೂ ನಗುತ್ತಿದ್ದರು. ಪ್ರಧಾನಮಂತ್ರಿಗಳು ಈ ಯೋಜನೆಗಳ ಜಾರಿ ಅಸಾಧ್ಯ ಎಂದರು. ಪ್ರತಿ ವರ್ಷ ಈ ಯೋಜನೆಗಳಿಗಾಗಿ 52 ಸಾವಿರ ಕೋಟಿ ನೀಡುತ್ತಿದ್ದೇವೆ. ಈ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಹಿಂದುಳಿದ ವರ್ಗದ ಹಿರಿಯ ನಾಯಕರಾದ ರೇವಣ್ಣ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ನಾವು ಗ್ಯಾರಂಟಿ ಯೋಜನೆಗಳ ಮೂಲಕ ಬಡ  ಕುಟುಂಬದ ಮನೆಯೊಡತಿಗೆ ಮಾಸಿಕ 2 ಸಾವಿರ, ಮನೆಗಳಿಗೆ 200 ಯೂನಿಟ್ ವರೆಗೂ ವಿದ್ಯುತ್ ಉಚಿತ, ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ನಮ್ಮ ಯೋಜನೆಗಳನ್ನು ದೇಶದ ಇತರೆ ರಾಜ್ಯಗಳು ಅನುಸರಿಸುತ್ತಿವೆ” ಎಂದು ತಿಳಿಸಿದರು.

ದೇಶದಲ್ಲಿ ಜಾತಿ ಗಣತಿ ಅಗತ್ಯ

“ಸ್ಥಳೀಯ ಸಂಸ್ಥೆಗಳಲ್ಲೂ ನಾವು ಮೀಸಲಾತಿ ನೀಡುತ್ತಿದ್ದೇವೆ. 73-74ನೇ ತಿದ್ದುಪಡಿ ವೇಳೆ ನಾನು ರಾಜೀವ್ ಗಾಂಧಿ ಅವರಿಗೆ ಈ ತಿದ್ದುಪಡಿ ಯಾಕೆ ಎಂದು ಕೇಳಿದ್ದೆ. ಅದಕ್ಕೆ ಅವರು ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರನ್ನು ತಯಾರು ಮಾಡಬೇಕು. ನಾಯಕರುಗಳನ್ನು ತಯಾರು ಮಾಡುವವನೇ ನಿಜವಾದ ನಾಯಕ ಎಂದು ಅವರು ಹೇಳಿದರು. ಸಮಾಜದ ಎಲ್ಲಾ ವರ್ಗದ ಜನರು ನಾಯಕರಾಗಬೇಕು ಎಂಬುದು ಅವರ ಬಯಕೆಯಾಗಿತ್ತು. ಈ ದೇಶದಲ್ಲಿ ಜಾತಿ ಗಣತಿ ಅಗತ್ಯವಾಗಿದ್ದು, ಕೇಂದ್ರ ಸರ್ಕಾರ ಮನೆ ಮನೆ ಜನಗಣತಿಗೆ ಮುಂದಾಗಿದೆ. ಜಾತಿಗಣತಿ ಮೂಲಕ ಅಂತರವನ್ನು ಕಡಿಮೆ ಮಾಡಬೇಕು” ಎಂದರು.

ಹಿಂದುಳಿದ ವರ್ಗಗಳ ಹಿತಾಸಕ್ತಿ ಕಾಪಾಡಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ

“ಬಬನ್ ರಾವ್ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಓಬಿಸಿ ಮಹಾಸಂಘವು ರಾಜಕೀಯ ಇಚ್ಛಾಶಕ್ತಿ ಇಲ್ಲದೇ ನಿಮ್ಮ ಹಕ್ಕಿಗಾಗಿ ಶ್ರಮಿಸುತ್ತಿದೆ. ನಿಮ್ಮ ಆಶೋತ್ತರಗಳನ್ನು ಈಡೇರಿಸಲು ನಾವು ಬದ್ಧವಾಗಿದ್ದೇವೆ. ನಾವು ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಬಸವಣ್ಣನವರ ತತ್ವ, ದೇಶದ ಹಿತಾಸಕ್ತಿಗೆ ಬದ್ಧರಾಗಿದ್ದೇವೆ. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಧ್ವನಿಗೆ ಸ್ಪಂದಿಸುವ ಸರ್ಕಾರವಿದೆ ಎಂಬ ಸಂದೇಶವನ್ನು ನೀವು ರಾಷ್ಟ್ರದಾದ್ಯಂತ ರವಾನಿಸಬೇಕು” ಎಂದು ಹೇಳಿದರು.

“ರಾಷ್ಟ್ರ ಮಟ್ಟದಲ್ಲಿ ನೀವು ನಿಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಬೇಕಾದರೆ ನಮ್ಮ ಪಕ್ಷದ ಪರವಾಗಿ ನಿಲ್ಲಬೇಕು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ಸಾಧ್ಯ. ಸೋನಿಯಾ ಗಾಂಧಿ ಅವರಿಗೆ ಪ್ರಧಾನಮಂತ್ರಿ ಹುದ್ದೆ ಒಲಿದು ಬಂದಾಗ, ಅವರು ಈ ದೇಶದ ಹಿತಕ್ಕಾಗಿ ಆ ಅಧಿಕಾರವನ್ನು ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರು ಪ್ರಾಧಾನಿಯಾಗಲಿ ಎಂದರು. ಅವರ ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ, ಆಹಾರ ಭದ್ರತಾ ಕಾಯ್ದೆ, ಉದ್ಯೋಗ ಖಾತರಿ ಯೋಜನೆ ನೀಡಲಾಯಿತು. ಇದನ್ನು ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಎಲ್ಲಾ ವರ್ಗದವರ ಹಿತಕಾಯಲು ತಿದ್ದುಪಡಿ ಜಾರಿಗೆ ತಂದಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಒಬಿಸಿ ಮಹಾಸಂಘಟನೆ ಬೇಡಿಕೆಗಳಿಗೆ ಮನ್ನಣೆ ಸಿಗಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ” ಎಂದು ತಿಳಿಸಿದರು.

Key words: Congress, social justice, society, CM DK Shivakumar

The post ಎಲ್ಲ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಕಾಂಗ್ರೆಸ್ ಬದ್ಧ: ಸಿಎಂ ಡಿ.ಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸೆಂಟಮ್ ಎಲೆಕ್ಟ್ರಾನಿಕ್ಸ್ ನಿಂದ ನಾಲ್ಕು ವರ್ಷಗಳಲ್ಲಿ 500 ಕೋಟಿ ರೂ. ಹೂಡಿಕೆ-ಸಚಿವ ಎಂ. ಬಿ ಪಾಟೀಲ್

ಬೆಂಗಳೂರು,ಆಗಸ್ಟ್,7,2026 (www.justkannada.in):  ರಕ್ಷಣಾ ಉದ್ಯಮದಲ್ಲಿ ಹೆಸರು ಮಾಡಿರುವ ಸೆಂಟಮ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು...

ಆ.13ರ  ಬಂದ್ ಮುಂದೂಡುವುದು ಸೂಕ್ತ – ಕುರುಬೂರು ಶಾಂತಕುಮಾರ್

ಮೈಸೂರು,ಆಗಸ್ಟ್,7,2026 (www.justkannada.in):  ತಮಿಳುನಾಡಿಗೆ ನೀರು ಬಿಡುದಂತೆ ಆಗ್ರಹಿಸಿ ಆಗಸ್ಟ್ 13 ರಂದು...

ಎರಡು ದಿನ ಕಳೆದ್ರೆ ಎಲ್ಲರೂ ಸುಮ್ಮನಾಗ್ತಾರೆ- ಸಚಿವ ಪುಟ್ಟರಂಗಶೆಟ್ಟಿ

ಚಾಮರಾಜನಗರ,ಆಗಸ್ಟ್,7,2026 (www.justkannada.in):  ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಸಚಿವ ಸ್ಥಾನ ಕೈತಪ್ಪಿದ...

ಮೈಸೂರಿನಲ್ಲಿಆಷಾಢ ಸಂಭ್ರಮ: ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ, ಭಕ್ತರಿ ಅನ್ನಸಂತರ್ಪಣೆ

ಮೈಸೂರು,ಆಗಸ್ಟ್,7,2026 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊನೆಯ ಆಷಾಢ ಸಂಭ್ರಮವಾಗಿದ್ದು ನಗರದ...