ಮೈಸೂರು,ಜೂನ್,30,2025 (www.justkannada.in): ಕೃಷಿ, ತೋಟಗಾರಿಕೆ ಕೃಷಿಯಲ್ಲಿ ಆಧುನಿಕ ಪದ್ಧತಿಯನ್ನು ಅನುಸರಿಸಿ ಆದಾಯ ಕಂಡುಕೊಳ್ಳಬೇಕು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಬರುವಂತಹ ಬೆಳೆಗಳನ್ನು ಬೆಳೆಯುವ ಕಡೆಗೆ ರೈತರು ಮುಂದಾಗಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಮೈಸೂರು ತಾಲ್ಲೂಕಿನ ತೋಟಗಾರಿಕೆ ಮಹಾವಿದ್ಯಾಲಯದ ಆವರಣದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ಸಹಯೋಗದೊಂದಿಗೆ ಹುಣಸೂರು ತಾಲ್ಲೂಕಿನಕೆಬ್ಬೆಕೊಪ್ಪಲು ಗ್ರಾಮದ ರೈತರಿಗೆ ಏರ್ಪಡಿಸಿದ್ದ ತೋಟಗಾರಿಕೆ ಆಧಾರಿತ ಕೃಷಿ ಪದ್ಧತಿಯ ತರಬೇತಿ ಹಾಗೂ ಪರಿಕರಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಬೇಸಾಯ ತುಂಬಾ ಕಷ್ಟವಾಗಿದೆ. ಏನೇ ಕಷ್ಟವಾದರೂ ಭೂಮಿ ತಾಯಿ ನಂಬಿಕೊಂಡು ಕಷ್ಟಪಟ್ಟು ಬಿತ್ತನೆ ಮಾಡುತ್ತೇವೆ. ಭೀಕರ ಬರಗಾಲ ಬಂದಾಗ ಒಣಗುತ್ತದೆ. ಒಂದೊಮ್ಮೆ ಮಳೆ ಜಾಸ್ತಿಯಾದರೂ ತೊಂದರೆಯಾಗುತ್ತದೆ. ಆದರೆ, ತೋಟಗಾರಿಕೆ ಬೆಳೆಯಲ್ಲಿ ಈ ರೀತಿಯಾಗಲ್ಲ. ತೋಟಗಾರಿಕೆ ಬೆಳೆಗಳನ್ನು ಅನುಸರಿಸಿದರೆ ಶಾಶ್ವತವಾಗಿ ಉಳಿದು ಮೊಮ್ಮಕ್ಕಳ ಕಾಲದ ತನಕವೂ ಉಳಿಸಬಹುದು. ದಾಳಿಂಬೆ, ಸಪೋಟ,ಪಪ್ಪಾಯಿ ಬೆಳೆಗಳನ್ನುಸುಲಭವಾಗಿ ಬೆಳೆಯಬಹುದು. ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯವೂ ಬರಲಿದೆ ಎಂದರು.
ಹೊಗೆಸೊಪ್ಪು ಬೆಳೆಯುವ ಜತೆಗೆ ತರಕಾರಿ, ಹೂವು ಬೆಳೆದರೆ ಖರ್ಚಿಗೆ ದುಡ್ಡು ಬರಲಿದೆ. ಎರಡು ಎಕರೆಯಲ್ಲಿ ಒಂದು ಎಕರೆಯನ್ನು ಸಮಗ್ರ ಕೃಷಿ ಪದ್ಧತಿಗೆ ಅನುಸರಿಸಬೇಕು. ಇಂದು ತರಕಾರಿ, ಹಣ್ಣುಗಳ ದರ ಹೆಚ್ಚಾಗಿರುವ ಕಾರಣ ಆದಾಯ ಮಾತ್ರ ತಪ್ಪುವುದಿಲ್ಲ. ತೋಟಗಾರಿಕೆ ಕೃಷಿ ಮಾಡಲು ಹೆಚ್ಚು ನೀರು ಬೇಕಿಲ್ಲ. ಹನಿ ನೀರಾವರಿ ಬಳಸಬಹುದು. ಸರ್ಕಾರದಿಂದಲೂ ಹನಿ, ತುಂತುರು ನೀರಾವರಿಗೆ ಸಬ್ಸಿಡಿ ಕೊಡುವುದರಿಂದ ರೈತರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತರು ಯಾವ ಕಾಲಕ್ಕೆ ಯಾವ ಬೆಳೆಗಳನ್ನು ಹಾಕಬೇಕು. ಯಾವ್ಯಾವ ಸಮಯದಲ್ಲಿ ಬೆಲೆಗಳು ಹೆಚ್ಚಾಗುತ್ತವೆ ಎಂಬುದನ್ನು ನೋಡಿ ಬೆಳೆಗಳನ್ನು ಹಾಕಬೇಕು. ತರಕಾರಿ ಪದಾರ್ಥಗಳಿಗೆ ನಿತ್ಯ ಬೆಲೆ ಇದೆ. ಟೋಮಾಟೋ, ಹೂಕೋಸು, ಸೊಪ್ಪಿಗೆ ಬೆಲೆ ಇದ್ದೇ ಇರುತ್ತದೆ. ಇಂತಹವುಗಳನ್ನು ಬೆಳೆಯಬೇಕು ಎಂದು ನುಡಿದರು. ರೈತರು ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಿದ್ದಾರೆ. ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲು ಯೋಚಿಸುತ್ತಿಲ್ಲ. ಜಮೀನಿನ ಬೆಲೆ ಕೋಟಿ ರೂ.ದಾಟಿದೆ ಎಂದು ಖರೀದಿದಾರರು ಬಂದಾಕ್ಷಣ ಮಾರಿ ಮದುವೆ ಮಾಡುತ್ತಾರೆ. ಕೆಲವರು ಸಾಲ ಮಾಡಿ ಮದುವೆ ಮಾಡಿ ಅಮೇಲೆ ಜಮೀನು ಮಾರಿ ತೀರಿಸುತ್ತಾರೆ. ಅದರ ಬದಲಿಗೆ ಸರಳ ವಿವಾಹ ಮಾಡಿ ಜಮೀನು ಉಳಿಸಿಕೊಳ್ಳಬೇಕು ಎಂದು ರೈತರಿಗೆ ಮನವಿ ಮಾಡಿದರು.
ದುಡಿಯುವ ಸಮಯದಲ್ಲಿ ಸುಮ್ಮನಾಗುತ್ತಾರೆ. ಪದವಿ ಮಾಡಿದವರಿಗೆ ಉದ್ಯೋಗ ಸಿಗದೆ 8 ರಿಂದ 12 ಸಾವಿರ ರೂ.ವೇತನಕ್ಕೆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಾರೆ. ಊರಲ್ಲಿ ಇರುವ ಜಮೀನಿನಲ್ಲಿ ಕೃಷಿ ಮಾಡಲಾಗದೆ ನನ್ನ ಮಗನಿಗೆ ಹತ್ತು ಸಾವಿರ ರೂ. ಸಂಬಳ ಇದ್ದರೂ ಸರಿ,ಕೆಲಸ ಕೊಡಿಸುವಂತೆ ಅರ್ಜಿಹಿಡಿದುಕೊಂಡು ಬರುತ್ತಾರೆ. ಕೆಲವು ಕಡೆಗಳಲ್ಲಿ ಕಾಯಂ ಮಾಡಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಏಜೆನ್ಸಿಗಳ ಮೂಲಕ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಕೋಲಾರದಲ್ಲಿ ಒಂದು ಎಕರೆಯಲ್ಲಿ ಮಾವಿನ ಹಣ್ಣು ಬೆಳೆದು ಐದು ಲಕ್ಷ ಸಂಪಾದನೆ ಮಾಡುತ್ತಾರೆ. ಮಾವು ಬೆಳೆದು ಅವರೇ ಮಾಗಿಸುತ್ತಾರೆ. ಅವರೇ ಲೋಡ್ ಮಾಡಿ ಸಾಗಿಸುತ್ತಾರೆ. ಅದೇ ರೀತಿ ನಾವು ಮಾಡಬೇಕು ಎಂದರು. ಇಂದು ಕೃಷಿಯಲ್ಲಿ ಹೊಸ ಹೊಸ ವಿಧಾನಗಳು ಬರುತ್ತಿವೆ. ಕೃಷಿ ಚಟುವಟಿಕೆಗೆ ಸಾಕಷ್ಟು ಕೃಷಿ ಕಾರ್ಮಿಕರು ಸಿಗುತ್ತಿಲ್ಲ. ಹಾಗಾಗಿ, ಇಂದಿನ ಆಧುನಿಕ ಕೃಷಿಯನ್ನು ತಿಳಿದು ಅಳವಡಿಸಿಕೊಂಡು ತೋಟಗಾರಿಕೆಯಲ್ಲಿ ಸಂಪಾದನೆ ಮಾಡಬೇಕು. ಅದರಿಂದ ಬರುವ ಆದಾಯ ಹೆಚ್ಚಳ ಮಾಡಿಕೊಳ್ಳಬೇಕು. ರೈತರು ಕಷ್ಟಪಟ್ಟು ದುಡಿಯಬೇಕು. ದುಡಿದರೆ ರೈತ ನೆಮ್ಮದಿಯಾಗಿ ಇರುತ್ತಾನೆ. ಶ್ರೀಮಂತರು ನೆಮ್ಮದಿಯಿಂದ ಇರಲ್ಲ. ಬಡವರು ನೆಮ್ಮದಿಯಿಂದ ಜೀವನ ಮಾಡುತ್ತಾರೆ ಎಂಬುದನ್ನು ಗಮನಿಸಬೇಕು ಎಂದರು.
ಹುಣಸೂರು ತಾಲ್ಲೂಕು ಅಭಿವೃದ್ದಿ:
ಹುಣಸೂರು ತಾಲ್ಲೂಕಿನಲ್ಲಿ ೩೫ಸಾವಿರ ಎಕರೆಯಲ್ಲಿ ಸಣ್ಣ ನೀರಾವರಿ ಇದ್ದರೂ ಕೃಷಿ ಮಾಡುತ್ತಿರಲಿಲ್ಲ. ನಾನು ಶಾಸಕನಾದ ಮೇಲೆ ಅದನ್ನು ದೊಡ್ಡ ನೀರಾವರಿಯನ್ನಾಗಿ ಮಾಡಿದ್ದರಿಂದ ತುಂಬಾ ಅನುಕೂಲವಾಯಿತು. ಹೋಬಳಿಗೊಂದು ಕೆಇಬಿ ಸ್ಟೇಷನ್ ಸ್ಥಾಪಿಸಲಾಯಿತು. ಕಟ್ಟೆಮಳಲವಾಡಿಯಲ್ಲಿ 24 ದಿನಗಳಲ್ಲಿ ಚಾನೆಲ್ ತೆಗೆಸಿ ನೀರು ಕೊಡಲಾಯಿತು. ಬಿಳಿಕೆರೆ, ಧರ್ಮಪುರ, ಹಳೆಬೀಡು ಹೋಬಳಿಯಲ್ಲಿ ಹಾಸ್ಟೆಲ್, 16 ಹೈಸ್ಕೂಲ್ ಗಳ ಸ್ಥಾಪನೆ, ಮೂರು ಪದವಿ ಕಾಲೇಜು, ಐದು ಪಿಯು ಕಾಲೇಜುಗಳು, ಐದು ಪಶು ಆಸ್ಪತ್ರೆಗಳು ಆರಂಭವಾಗುವಂತೆ ಮಾಡಿದ್ದೆ ಎಂದರು.
ಹುಣಸೂರು ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆ ಮಾಡಲು ನಾಲೆ, ಕೆರೆಕಟ್ಟೆಗಳು ಇವೆ. ಫಲವತ್ತಾದ ಭೂಮಿ ಇದೆ.ಕೊಡಗಿನಲ್ಲಿ ಫಲವತ್ತತೆ ಇಲ್ಲ. ನಾನು ತೆಂಗಿನ ಮರಗಳನ್ನು ಬೆಳೆಸಿದ್ದೇನೆ. ಸುಮಾರು ವರ್ಷಗಳಿಂದ ತೆಂಗಿಗೆ ಬೆಲೆಯೇ ಸಿಕ್ಕಿರಲಿಲ್ಲ. ತೆಂಗಿನಕಾಯಿ, ಎಳನೀರು, ಕೊಬ್ಬರಿಗೆ ಒಳ್ಳೆಯ ಬೆಲೆ ಬಂದಿದೆ. ಸುಮಾರು ವರ್ಷಗಳಿಂದ ಬೆಲೆಯೇ ಇರಲಿಲ್ಲ. ತೋಟಗಾರಿಕೆ ಬೆಳೆಗಳನ್ನು ಮಾಡದಿದ್ದರೆ ತುಂಬಾ ಕಷ್ಟವಾಗಲಿದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಜನಾರ್ಧನ್ ವಹಿಸಿದ್ದರು.
ಗುಂಗ್ರಾಲ್ ಛತ್ರದ ಅಧ್ಯಕ್ಷರಾದ ಮಂಜುಳಾ, ಗೇರು ಸಂಶೋಧನಾ ಸಂಸ್ಥೆ ವಿಜ್ಞಾನಿ ಡಾ.ಸಿ.ಎನ್.ಮಂಜೇಶ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ.ನಾಗರಾಜು ಹಾಜರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಆರ್.ಸಿದ್ದಪ್ಪ, ಡಾ.ಕೆ.ಸಿ.ಕಿರಣಕುಮಾರ್, ಕೆ.ಎಂ.ಶಿವಕುಮಾರ್, ಡಾ.ಮನುಕುಮಾರ್ ಭಾಗವಹಿಸಿದ್ದರು.
Key words: Follow, modern, agriculture, horticulture, income, MLA GT Deve Gowda
The post ಕೃಷಿ, ತೋಟಗಾರಿಕೆಯಲ್ಲಿ ಆಧುನಿಕ ಪದ್ಧತಿ ಅನುಸರಿಸಿ ಆದಾಯ ಕಂಡುಕೊಳ್ಳಿ- ಶಾಸಕ ಜಿ.ಟಿ.ದೇವೇಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.