ಕಲ್ಬುರ್ಗಿ ಏಪ್ರಿಲ್, 16,2025 (www.justkannada.in): ಕೇಂದ್ರ ಸರ್ಕಾರ ದೇಶದ ಯುವ ಜನತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀನಿ ಅಂದಿದ್ದ ಮೋದಿ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಕೊಡಬೇಕಿತ್ತು. ಆದರೆ 20 ಲಕ್ಷ ಉದ್ಯೋಗವನ್ನೂ ಕೊಡದೆ ಪರಮ ಸುಳ್ಳು ಹೇಳಿ ಯುವ ಜನರನ್ನು ವಂಚಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧನ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಯುವಕ ಯುವತಿಯರಿಗೆ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಯುವ ಪದವೀಧರರಿಗೆ ನೇಮಕಾತಿ ಪತ್ರವನ್ನು ವಿತರಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ನಾವು ನುಡಿದಂತೆ ನಡೆಯುತ್ತಾ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಇದರಲ್ಲಿ ಯುವ ನಿಧಿ ಕಾರ್ಯಕ್ರಮ ಕೂಡ ಸೇರಿದೆ. ಭತ್ಯೆ ಜೊತೆಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗವನ್ನೂ ಒದಗಿಸುತ್ತಿದ್ದೇವೆ ಎಂದರು.
ಮಾರುಕಟ್ಟೆ ಆಧಾರಿತ ಕೌಶಲ್ಯ ನೀಡಿ ಉದ್ಯೋಗ ಸೃಜಿಸಲು ಸಚಿವ ಶರಣ ಪ್ರಕಾಶ್ ಅವರಿಗೆ ಸೂಚಿಸಿದ್ದೇನೆ. ಹೀಗಾಗಿ ನೋಂದಾಯಿತರಾದ ಎಲ್ಲರಿಗೂ ಉದ್ಯೋಗ ಸಿಕ್ಕೇ ಸಿಗುತ್ತದೆ ಎಂದು ಭರವಸೆ ನೀಡಿದರು
ಉದ್ಯೋಗ ಕೊಡುವವರು, ಉದ್ಯೋಗ ಪಡೆಯುವವರನ್ನು ಒಟ್ಟಿಗೇ ಒಂದೇ ವೇದಿಕೆಯಲ್ಲಿ ತರುವ ಮೂಲಕ ಉದ್ಯೋಗಗಳನ್ನು ಒದಗಿಸುವುದಕ್ಕಾಗಿ ವಿಭಾಗಾವಾರು ಉದ್ಯೋಗಮೇಳಗಳನ್ನು ಸಂಘಟಿಸುತ್ತಿದ್ದೇವೆ ಎಂದರು.
ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಹೂಡಿಕೆ ಹೆಚ್ಚಾದಷ್ಟೂ ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ. ಕೇಂದ್ರ ಸರ್ಕಾರ ದೇಶದ ಯುವ ಜನತೆಯನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದೆ. ಆದರೆ ನಮ್ಮ ಸರ್ಕಾರ ಯುವ ಜನತೆ ಕೈಗೆ ಉದ್ಯೋಗ ನೀಡಿ ಅವರ ಬದುಕು ಕಟ್ಟುವ ಕೆಲಸ ಮಾಡುತ್ತಿದೆ ಎಂದರು.
ಅಜಯ್ ಸಿಂಗ್ KKRDB ಅಧ್ಯಕ್ಷರಾದ ಬಳಿಕ 5000 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಗಳನ್ನು ಕಲ್ಯಾಣ ಕರ್ನಾಟಕದಲ್ಲಿ ನಿರ್ವಹಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದರು.
Key words: Central Government, Complete, neglect , youth, CM Siddaramaiah
The post ಕೇಂದ್ರದಿಂದ ಯುವ ಜನತೆಯ ಸಂಪೂರ್ಣ ನಿರ್ಲಕ್ಷ್ಯ: ಉದ್ಯೋಗ ಕೊಡ್ತೀನಿ ಅಂತಾ ಮೋದಿ ವಂಚನೆ ಮಾಡಿದ್ರು- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.