ಮೈಸೂರು,ಸೆಪ್ಟಂಬರ್,18,2026 (www.justkannada.in): ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಮತ್ತು ಪರಿಸರಸೂಕ್ಷ್ಮ ವಲಯ ಅಧಿಸೂಚನೆ ಕುರಿತಾದ ಗಂಭೀರ ಚರ್ಚೆಗೆ ಸೆಪ್ಟಂಬರ್ 21 ರಿಂದ ಮೂರು ದಿನಗಳ ವಿಧಾನಸಭೆ, ವಿಧಾನ ಪರಿಷತ್ ಉಭಯ ಸದನಗಳ ವಿಶೇಷ ಅಧಿವೇಶನ ಆರಂಭವಾಗುತ್ತಿದೆ. ಹೀಗಾಗಿ ಸರ್ಕಾರದ ಜೊತೆ ಕೈಜೋಡಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಹೆಚ್ ಎ ವೆಂಕಟೇಶ್, ವಿಶೇಷ ಅಧಿವೇಶನದ ಕಾರ್ಯಕಲಾಪ ಸುಲಲಿತವಾಗಿ ನಡೆಯಲು ವಿರೋಧ ಪಕ್ಷಗಳು ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸುವ ಅಗತ್ಯವಿದೆ. ಕಳೆದ ಮಳೆಗಾಲದ ಅಧಿವೇಶನವು ವಿರೋಧಪಕ್ಷಗಳ ನಿರ್ಲಕ್ಷ್ಯ ಹಾಗೂ ಅಸಮರ್ಥನೀಯ ಧರಣಿ ಪ್ರತಿಭಟನೆಗೆ ಬಲಿಯಾಯಿತು. ಈ ಬಾರಿ ಇದಕ್ಕೆ ಅವಕಾಶ ನೀಡದೆ ವಿಪಕ್ಷಗಳು ಸರಕಾರದೊಂದಿಗೆ ಕೈಜೋಡಿಸಿ ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸುವ ಅಗತ್ಯವಿದೆ.
ರಾಜ್ಯದಾದ್ಯಂತ ಮಳೆ ಕೊರತೆ ಎದುರಾಗಿ ರೈತರು ಬಹಳ ಕಷ್ಟದಲ್ಲಿದ್ದಾರೆ. ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕ್ಷುಲ್ಲಕ ರಾಜಕೀಯ ಬದಿಗೊತ್ತಿ ವಿಪಕ್ಷಗಳು ಸರ್ಕಾರದೊಂದಿಗೆ ಸ್ಪಂದಿಸಿ ಜನರ ಸಂಕಷ್ಟ ನಿವಾರಿಸಲು ಮುಂದಾಗಬೇಕಿದೆ ಎಂದು ಹೇಳಿದ್ದಾರೆ.
ಪರಿಸರ ಸೂಕ್ಷ್ಮ ವಲಯದ ಕುರಿತು ಕೆ. ಕಸ್ತೂರಿರಂಗನ್ ವರದಿ ಆಧರಿಸಿ ಕೇಂದ್ರದ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ರಾಜ್ಯದ ಪಶ್ಚಿಮಘಟ್ಟ ಜಿಲ್ಲೆಗಳು, ಕರಾವಳಿ ಪ್ರದೇಶ, ಕೊಡಗು ಸೇರಿದಂತೆ ಇನ್ನಿತರ ಕಡೆ ಜನತೆಯಲ್ಲಿ ಆತಂಕದ ವಾತಾವರಣ ಮೂಡಿದೆ. ಎದುರಾಗಿರುವ ಈ ಅನಿಶ್ಚಿತತೆಯನ್ನು ಹೋಗಲಾಡಿಸಿ, ಜನತೆಯಲ್ಲಿ ಭರವಸೆ ತುಂಬಲು ಮತ್ತು ಪರಿಸರ ಸಮತೋಲನದೊಂದಿಗೆ ಜನಜೀವನ ನಿರ್ವಹಣೆಗೆ ಅನುವಾಗುವಂತೆ ಪರ್ಯಾಯ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಈ ಕಾರಣದಿಂದ ರಾಜ್ಯ ಸರ್ಕಾರಕ್ಕೆ ವಿಪಕ್ಷಗಳ ಸಹಕಾರ ಬೇಕಿದೆ ಎಂದು ಹೆಚ್.ಎ ವೆಂಕಟೇಶ್ ತಿಳಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯ ನಿರ್ವಹಣೆಗಾಗಿ ಸಿಎಂ ಶಿವಕುಮಾರ್ ಮತ್ತು ಡಿಸಿಎಂ ಡಾ. ಜಿ. ಪರಮೇಶ್ವರ ಪ್ರತ್ಯೇಕ ಅಧ್ಯಯನಗಳನ್ನು ನಡೆಸಿದ್ದಾರೆ. ರಾಜ್ಯದಲ್ಲಿ ಎದುರಾಗಿರುವ ಭೀಕರ ಪರಿಸ್ಥಿತಿ ಕುರಿತಾಗಿ ಕೇಂದ್ರ ಸರ್ಕಾರಕ್ಕೂ ಮನವರಿಕೆ ಮಾಡಿಕೊಡಲಾಗಿದೆ. ಇದನ್ನು ಆಧರಿಸಿ ಈಗಾಗಲೇ ರಾಜ್ಯದ ಹೆಚ್ಚಿನ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಪರಿಹಾರ ಬಿಡುಗಡೆಗೆ ಅನುವು ಮಾಡಿಕೊಡಬೇಕಿತ್ತು. ಆದರೆ ರಾಜ್ಯದ ಬಿಜೆಪಿ ನಾಯಕರಿಂದ ಇಂತಹ ಯಾವುದೇ ಧನಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಇನ್ನಷ್ಟು ತಡಮಾಡುವುದರ ಬದಲು ಬಿಜೆಪಿ ಸಂಸದರು ಕೇಂದ್ರದ ಜೊತೆ ಮಾತನಾಡಿ ರಾಜ್ಯಕ್ಕೆ ದಕ್ಕ ಬೇಕಾದ ಸಮರ್ಪಕ ಬರ ಪರಿಹಾರ ಮತ್ತು ತೆರಿಗೆಯ ವಾಸ್ತವಿಕ ಪಾಲನ್ನು ದೊರಕಿಸಿಕೊಡುವ ಕೆಲಸಕ್ಕೆ ಮುಂದಾಗಬೇಕು.
ಸೆ . 21 ರಿಂದ ಆರಂಭವಾಗುವ ಉಭಯ ಸದನಗಳ ಚರ್ಚೆಯಲ್ಲಿ ವಿಪಕ್ಷದ ಎಲ್ಲಾ ಶಾಸಕರು, ಪರಿಷತ್ ಸದಸ್ಯರು ಸಕ್ರಿಯವಾಗಿ ಭಾಗಿಯಾಗಿ, ರೈತರ ಸಂಕಷ್ಟಕ್ಕೆ ಪರಿಹಾರೋಪಾಯ ಕಲ್ಪಿಸುವ ದಿಕ್ಕಿನಲ್ಲಿ ಸಕಾರಾತ್ಮಕವಾಗಿ ಯೋಚಿಸಬೇಕಿದೆ ಎಂದು ಎಚ್.ಎ. ವೆಂಕಟೇಶ್ ಸಲಹೆ ನೀಡಿದ್ದಾರೆ.
Key words: Special Session, Opposition parties, government, H.A. Venkatesh




