ಬೀದರ್,ಏಪ್ರಿಲ್,22,2026 (www.justkannada.in): ಬಸವ ತತ್ವ, ಸಿದ್ಧಾಂತಗಳ ಬಗ್ಗೆ ಬಹಳಷ್ಟು ಜನರು ಮಾತನಾಡುತ್ತಾರೆ. ಜೀವನದಲ್ಲಿ ಅದನ್ನು ಅನುಷ್ಠಾನಕ್ಕೆ ತಂದುಕೊಂಡಾಗ ಮಾತ್ರ ಬಸವ ತತ್ವ ಬೆಳೆಯಲು ಸಾಧ್ಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನುಡಿದರು.
ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಇಂದು ಆಯೋಜಿಸಿದ್ದ ಲಿಂ. ಡಾ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಮತ್ತು ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ಬಸವಣ್ಣನವರ ವಿಚಾರಧಾರೆಗಳು, ಶರಣ ಸಾಹಿತ್ಯವನ್ನು ಪ್ರಪಂಚಕ್ಕೆ ತೋರಿಸಿಕೊಟ್ಟವರು ಬೀದರ್ ಜಿಲ್ಲೆಯ ಜನರು. ಬಸವಣ್ಣ ಶ್ರೇಷ್ಠ ತತ್ವಗಳ ಪ್ರಚಾರ, ಮತ್ತು ಪ್ರಸಾರದ ಅಗತ್ಯವಿದೆ. ಇಲ್ಲವಾದರೆ ಅವು ಮಠ, ಗುರುಕುಲದಲ್ಲೇ ಉಳಿಯುತ್ತವೆ ಎಂದರು.
ಮನುವಾದ ಮತ್ತು ಚಾತುವರ್ಣ ಪದ್ಧತಿಯನ್ನು ತಿರಸ್ಕರಿಸಿದ್ದ ಬಸವಣ್ಣನವರು ಹೊಸ ಧರ್ಮ ಸ್ಥಾಪಿಸಿ ಎಲ್ಲ ಜಾತಿಗಳ ಜನರನ್ನು ಒಗ್ಗೂಡಿಸಿದರು . ಆದರೆ, ಅದನ್ನು ನೀವು ಒಪ್ಪುವುದಿಲ್ಲ. ಅನುಭವ ಮಂಟಪ ಸ್ಥಾಪಿಸಿ ಹಿಂದುಳಿದ ಸಮಾಜದ ಅಲ್ಲಮಪ್ರಭು ದೇವರನ್ನು ಅನುಭವ ಮಂಟಪದ ಅಧ್ಯಕ್ಷರಾಗಿ ಮಾಡಿದ್ದರು. ಎಲ್ಲಿಯವರೆಗೆ ನಾವೆಲ್ಲರೂ ಒಂದೇ ಎಂದು ಅನ್ನವುದಿಲ್ಲವೋ, ಬೇರೆಯವನ್ನು ಪ್ರೀತಿಸಿ ಅಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಯಾವುದೇ ಧರ್ಮ ಬೆಳೆಯುವುದಿಲ್ಲ” ಎಂದರು.
ಕಾರ್ಯಕ್ರಮದಲ್ಲಿ ಉಪ ರಾಷ್ಟಪತಿ ಸಿಪಿ ರಾಧಾಕೃಷ್ಣನ್, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಹಿರೇಮಠ ಸಂಸ್ಥಾನದ ಹಿರಿಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು, ಗದಗ ಮಠದ ತೊಂಟದ ಸಿದ್ದರಾಮ ಸ್ವಾಮೀಜಿ, ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.
Key words: Basava, Principle, grow, implement, life, Mallikarjun Kharge
The post ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವ ತತ್ವ, ಸಿದ್ದಾಂತ ಬೆಳೆಯಲು ಸಾಧ್ಯ- ಮಲ್ಲಿಕಾರ್ಜುನ ಖರ್ಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




