ಕಲಬುರಗಿ,ಆಗಸ್ಟ್,5,2026 (www.justkannada.in): ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ , ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿ.ಆರ್ ಪಾಟೀಲ್, ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವಿಚಾರವನ್ನು ನಿರಾಕರಿಸಿದ್ದಾರೆ. ಇವೆಲ್ಲವೂ ಬರಿ ಸುಳ್ಳು ವದಂತಿಗಳು. ಶಾಸಕ ಸ್ಥಾನ ಎಂಬುದು ತಮಗೆ ಸಿಕ್ಕ ಬರಿ ಅಧಿಕಾರದ ಹುದ್ದೆಯಲ್ಲ, ಬದಲಾಗಿ ಆಳಂದ ಕ್ಷೇತ್ರದ ಜನತೆ ತಮ್ಮ ಮೇಲಿಟ್ಟಿರುವ ಅಪಾರ ನಂಬಿಕೆ ಮತ್ತು ಜವಾಬ್ದಾರಿ. ಕ್ಷೇತ್ರದ ಜನ ನೀಡಿದ ಈ ಪವಿತ್ರ ಜನಾದೇಶಕ್ಕೆ ದ್ರೋಹ ಎಸಗುವ ಪ್ರಶ್ನೆಯೇ ಬರುವುದಿಲ್ಲ ಎಂದಿದ್ದಾರೆ.
ಸಚಿವ ಸ್ಥಾನ ಸಿಗಲಿ ಅಥವಾ ಸಿಗದಿರಲಿ, ಕ್ಷೇತ್ರದ ಜನರ ಸೇವೆ ಮಾಡುವುದನ್ನು ನಿಲ್ಲಿಸುವುದಿಲ್ಲ, ಸಾರ್ವಜನಿಕರು ಹಾಗೂ ಬೆಂಬಲಿಗರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಬಿ.ಆರ್ ಪಾಟೀಲ್ ತಿಳಿಸಿದ್ದಾರೆ.
ಸಚಿವ ಸ್ಥಾನ ಕೈತಪ್ಪಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಬಿ.ಆರ್ ಪಾಟೀಲ್, ತಮ್ಮ ಐದು ದಶಕಗಳ ಸುದೀರ್ಘ ರಾಜಕೀಯ ಪಯಣದಲ್ಲಿ ಅಧಿಕಾರ, ವ್ಯಕ್ತಿ ಹಾಗೂ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷದ ಸಿದ್ಧಾಂತವೇ ಮುಖ್ಯವಾಗಿದೆ. ಎಷ್ಟೇ ಸವಾಲುಗಳು ಎದುರಾದರೂ ಕಾಂಗ್ರೆಸ್ ಪಕ್ಷದ ಮೇಲಿನ ತಮ್ಮ ನಿಷ್ಠೆ ಎಂದಿಗೂ ಅಚಲವಾಗಿರುತ್ತದೆ ಎಂದು ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.
Key words: B.R. Patil, resigns, Vice Chairman , NITI Aayog
The post ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ.ಆರ್. ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




